Monday, June 2, 2008

ನಿರಾಸೆ ತಂದ ಉಷಾ ಪರಿಣಯ





ಮೇಳ ಹೊರಟ ಸ್ಥಳದಲ್ಲಿ ಸೇವೆಯಾಟ ನಡೆಯುವುದು ವಾಡಿಕೆ. ಈಗ ಎಲ್ಲ ಸಂಪ್ರದಾಯಗಳಿಗಿಂತಲೂ ಅನುಕೂಲ ಶಾಸ್ತ್ರವೇ ಪ್ರಧಾನವಾದ್ದರಿಂದಲೋ ಏನೋ, ಹೊಸನಗರ ಮೇಳದ ಈ ವರ್ಶದ ಕೊನೆಯ ಸೇವೆಯಾಟ ಬೆಂಗಳೂರು ಮಹಾನಗರದಲ್ಲಿ ನಡೆಯಿತು. ತೆಂಕು ತಿಟ್ಟಿನ ಉತ್ತಮ ಪ್ರದರ್ಶನವನ್ನು ಕಾಣಬಯಸಿ ಬಂದಿದ್ದ ಕಲಾಭಿಮಾನಿಗಳಿಗೆ ಮೊದಲ ಪ್ರದರ್ಶನ ರಂಗನಿರ್ದೇಶನದ ವೈಫಲ್ಯದಿಂದ ಭಾರೀ ನಿರಾಸೆ ಮೂಡಿಸಿತು.

ಮಧ್ಯಾಹ್ನ ೨.೩೦ ರಿಂದ ರಾತ್ರಿ ೯.೩೦ರವರೆಗೆ ಮೂರು ಪರಿಣಯದ (ಉಶಾ ಪರಿಣಯ, ಜಾಂಬವತಿ ಪರಿಣಯ, ಲಕ್ಷ್ಮೀ ಸ್ವಯಂವರ) ಕಥಾನಕಗಳೊಂದಿಗೆ ಸಂಯೋಜಿಸಲ್ಪಟ್ಟ ಯಕ್ಷಗಾನವು ಮೊದಲ ಪ್ರಸಂಗದೊಂದಿಗೇ ಮುಗ್ಗರಿಸಿತು. ಸಂಜೆ ೬.೩೦ ಆದರೂ ಮೊದಲ ಪ್ರಸಂಗವೇ ಮುಗಿಯಲಿಲ್ಲ. ತಾಳ್ಮೆ ಕಳೆದುಕೊಂದ ಕೆಲವು ಪ್ರೇಕ್ಷಕರು ಹೊರನಡೆದರು. ಮಂಟಪ ಪ್ರಭಾಕರ ಉಪಾಧ್ಯ ಮತ್ತು ಯಲಗುಪ್ಪ ಸುಬ್ರಮಣ್ಯರ ಜೋಡಿ ವೇಷಗಳು ತೆಂಕಿನ ಹಿಮ್ಮೇಳಕ್ಕೆ ಹೊಂದಿಕೊಳ್ಳಲಾಗದೆ ಚಡಪಡಿಸುತ್ತಿದ್ದುದು ಸ್ಪಷ್ಟ. ಸುಮಾರು ಎರಡು ಘಂಟೆಗೂ ಹೆಚ್ಚು ಕಾಲ ಈ ವೇಷಗಳು ರಂಗದಲ್ಲಿದ್ದು ಪ್ರೇಕ್ಷಕನನ ತಾಳ್ಮೆಯನ್ನು ಪರೀಕ್ಷಿಸಿದವು. ಮಂಟಪರಂತೂ ತಮ್ಮ ಏಕವ್ಯಕ್ತಿ ಪ್ರದರ್ಶನದ ಗುಂಗಿನಲ್ಲೇ ಅಭಿನಯಿಸಿದರು. ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆ ಏಕೋ ಕಳೆಗಟ್ಟಲಿಲ್ಲ. ಇದ್ದುದರಲ್ಲಿ ದಿವಾಕರ ರೈಯವರ ಅನಿರುದ್ಧನ ವೇಷ ಅಡ್ಡಿಯಿಲ್ಲ ಎನಿಸಿತು. ಈ ಕಲಾವಿದನಿಗೆ ರಂಗದಲ್ಲಿ ಒಳ್ಳೆಯ ಭವಿಷ್ಯವಿದ್ದಂತೆ ತೋರುತ್ತಿದೆ.

ತೆಂಕು ತಿಟ್ಟಿನ "ಹಿತರಕ್ಷಣೆ"ಯ ಉದ್ದೇಶದಿಂದ ಜನ್ಮತಾಳಿದ ಹೊಸನಗರ ಮೇಳಕ್ಕೆ ಬಡಗು ತಿಟ್ಟಿನ ಕಲಾವಿದರ ಅಗತ್ಯವಿದೆಯೆ ಎಂಬುದು ಒಂದು ಪ್ರಶ್ನೆ. ಒಂದು ವೇಳೆ ಅಗತ್ಯವಿದ್ದರೂ ಕೂಡ ಈ ರೀತಿಯ ಸಂಯೋಜನೆ ರಂಗದಲ್ಲಿ ಎಷ್ಟು ಪರಿಣಾಮಕಾರಿಯಾಗಬಲ್ಲುದು ಎಂಬುದುರ ಕುರಿತು ಯಕ್ಷಪ್ರೇಮಿಗಳು ಚಿಂತಿಸುವ ಅಗತ್ಯವಿದೆ. ಟೆಂಟ್ ಮೇಳದ ಪ್ರದರ್ಶನಗಳಲ್ಲಿ ಕೂಡ ಈ ರೀತಿಯ ಬೆರಕೆಯಿಂದ ಪ್ರದರ್ಶನದ ಒಟ್ಟಂದಕ್ಕೆ ತೊಡಕಾಗುತ್ತಿರುವುದು ವಾಸ್ತವ. ಕಲಾವಿದರಿಗೆ ಉಭಯ ತಿಟ್ಟುಗಳ ಸರಿಯಾದ ಅನುಭವವಿಲ್ಲದೆ ಪ್ರೇಕ್ಷಕನಿಗೆ ಕಲಸುಮೇಲೋಗರದ ಅನುಭವವಾಗುತ್ತಿರುವುದು ಸುಳ್ಳಲ್ಲ.

ಮೇಳದ ಸೇವೆಯಾಟಕ್ಕೆ ಪ್ರಧಾನ ಭಾಗವತ ಪದ್ಯಾಣರು ಬಂದರೊ ಇಲ್ಲವೋ ತಿಳಿಯಲಿಲ್ಲ. ಪದ್ಯಾಣರು ದುಬೈಯಿಂದ ಬರುತ್ತಾರೆ, ದೇವನಹಳ್ಳಿಯಲ್ಲಿ ಇದ್ದಾರೆ ಎಂಬ ಅಂತೆಕಂತೆಗಳ ಮಧ್ಯೆ ಮೊದಲ ಪ್ರಸಂಗದಿಂದ ಬೇಸತ್ತ ನಾನು, ಎ ಡಿ ಎ ರಂಗಮಂದಿರದ ಮೆಟ್ಟಲಿಳಿದಿದ್ದೆ.