Monday, April 20, 2009

ಐವತ್ತೈದನೆಯ ವೈಭವಾಚರಣೆಗೆ ಎಷ್ಟು ಮೃದಂಗಗಳು ಬೇಕು ?



ಶಂಕರ ಭಾಗವತ ಯಲ್ಲಾಪುರ ಅವರ ಸನ್ಮಾನ ಕಾರ್ಯಕ್ರಮ ನಾದವೈಭವ - ೫೫ ಎಂಬ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಶಂಕರ ಭಾಗವತರು ಬಡಗು ತಿಟ್ಟಿನ ಅತ್ಯುತ್ತಮ ಮದ್ದಳೆಗಾರರ ಸಾಲಿಗೆ ಸೇರಿದವರು ಎಂಬುವುದರಲ್ಲಿ ಎರಡು ಮಾತಿಲ್ಲ. ಕಾಳಿಂಗ ನಾವಡ, ಧಾರೇಶ್ವರ ಮುಂತಾದ ಖ್ಯಾತ ಭಾಗವತರ ಭಾಗವತಿಕೆಯನ್ನು ಸಮರ್ಥವಾಗಿ ನಿಭಾಯಿಸಿದವರು ಶಂಕರ ಭಾಗವತರು. ಇಂಥಹ ಖ್ಯಾತ ಮದ್ದಲೆಗಾರರಿಗೆ ತನ್ನ ಐವತ್ತೈದನೆಯ ವರ್ಶದಲ್ಲಿ ಧಾರೇಶ್ವರ ಮತ್ತು ದುರ್ಗಪ್ಪ ಗುಡಿಗಾರರ ಪ್ರಯೋಗವನ್ನು ಅನುಕರಣೆ ಮಾಡಿ ಚಪ್ಪಾಳೆ ಗಿಟ್ಟಿಸುವ ಅವಶ್ಯಕತೆ ಇತ್ತೆ ಎಂಬುದು ಪ್ರಶ್ನೆ.

ಐದು ಮದ್ದಲೆ ವಾದನದ ಪ್ರಯೋಗ ಭಾಗವತ ಧಾರೇಶ್ವರರ ಕಲ್ಪನೆಯ ಕೂಸು. ದುರ್ಗಪ್ಪ ಗುಡಿಗಾರರ ಮೂಲಕ ಜನಪ್ರಿಯವಾದ ಈ ಪ್ರಯೋಗವನ್ನು ಇತ್ತೀಚಿನ ದಿನಗಳಲ್ಲಿ ಕಿರಿ ಮದ್ದಲೆಗಾರರು ಅನುಕುರಿಸುತ್ತಿರುವುದು ಕಂದು ಬರುತ್ತಿದೆ. ದುರ್ಗಪ್ಪ ಗುಡಿಗಾರರ ಮರಣಾ ನಂತರ ಧಾರೇಶ್ವರರು ಈ ಪ್ರಯೋಗವನ್ನು ಹೆಚ್ಚು ಕಡಿಮೆ ನಿಲ್ಲಿಸಿರುವಂತೆ ತೋರುತ್ತಿದೆ. ಹಿಂಧೋಳ (ಹಿಂದೂಸ್ಥಾನಿ ಮಾಲಕಂಸ್) ರಾಗದ ಐದು ಸ್ವರಗಳಿಗೆ ಸರಿಯಾಗಿ ಐದು ಮದ್ದಳೆಗಳನ್ನು ನುಡಿಸುವುದು ಈ ಪ್ರಯೋಗದ ಮೂಲ ಕಲ್ಪನೆ. ಸ್ವರಗಳ ಕಲ್ಪನೆಯಿಲ್ಲದ ಭಾಗವತರು ಮದ್ದಲೆಗಾರರು ಈಗ ಒಟ್ಟಾರೆ ಐದು ಮದ್ದಲೆ, ಆರು ಮದ್ದಲೆಗಳನ್ನು ಯವೊಂದು ಸೊಗಸೂ ಇಲ್ಲದೆ ಟಮ್ ಟಮ್ ಟಮ್ ಎಂಬ ನಾದ ಹೊರಡಿಸಿ ಚಪ್ಪಾಳೆ ಗಿಟ್ಟಿಸುವ ಸರ್ಕಸ್ಸಿಗೆ ಉಪಯೋಗಿಸುತ್ತಿರುವುದು ಚೋದ್ಯವೇ ಸರಿ. ಈ ಜಾಡ್ಯ ಈಗ ಖ್ಯಾತ ಮದ್ದಲೆಗಾರ ಶಂಕರ ಭಾಗವತರಿಗೂ ತಗುಲಿದ್ದು ಒಂದು ದುರಂತ.

ಶಂಕರ ಭಾಗವತರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಎಂಟು ಮದ್ದಲೆ ಬಳಸಿದರು. ಸಾಲದ್ದಕ್ಕೆ ಎರಡು ತಬಲ ಪ್ರಯೋಗವೂ ನಡೆಯಿತು. ಅಂತೂ ಐವತ್ತೈದನೆಯ ವರುಶದ ನಾದವೈಭವ ಶಂಕರ ಭಾಗವತರ ಮೃದಂಗಜೀವನದಲ್ಲಿ ಅಳಿಸಲಾಗದ ಕಲೆಯೊಂದನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು ಎನ್ನಲಡ್ಡಿಯಿಲ್ಲ.

Thursday, April 16, 2009

ಬೆಂಗಳೂರು - ಯಕ್ಷಗಾನ ವೀಕ್ಷಣೆಯೆಂಬ ಹಿಂಸೆ

ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡುವುದು ಸಭ್ಯ, ಸುಸಂಕೃತ ಪ್ರೇಕ್ಷಕರಿಗೆ ಹಿಂಸೆಯಾಗಿ ಪರಿಣಮಿಸಿದೆ. ಮೊದಲನೆಯದಾಗಿ ಪ್ರೇಕ್ಷಕರ, ಅಭಿಮಾನಿಗಳ ಅತಿರೇಕದ ವರ್ತನೆ. ಇವರ ಸಿಳ್ಳು, ಚಪ್ಪಾಳೆ, ಕೂಗಾಟ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ಇವರು ಯಕ್ಷಗಾನ ಪ್ರದರ್ಶನ ನೋಡುವುದಕ್ಕೆ ಬಂದಿದ್ದಾರೆಯೆ ಅಥವ ಕೂಗಾಡುವುದಕ್ಕೆ ಬಂದಿದ್ದಾರೆಯೊ ಎನಿಸುತ್ತದೆ. ಬಹುತೇಕ ಜನರು ಪಾನಮತ್ತರಾಗಿ ಬರುವುದೂ ಕೂಡ ಸಾಮಾನ್ಯ.

ಎರಡನೆಯದಾಗಿ ಅತೀ ಎನಿಸುವ ಸಭಾ ಕಾರ್ಯಕ್ರಮ. ಯಕ್ಷಗಾನ ಯೋಗಕ್ಷೇಮ ಹೊಣೆ ಹೊತ್ತಿರುವ ಹಿರಿಯರೊಬ್ಬರು ಈಗ ತೀರ ಹಾಸ್ಯಾಸ್ಪದರಾಗಿರುವುದು ದೊಡ್ಡ ದುರಂತ. ಘಂಟೆಗತ್ತಲೆ ನಡೆಯುವ ಈ ಸಭಾ ಕಾರ್ಯಕ್ರಮಗಳಿಂದಾಗಿ ಹೆಂಗಸರು ಮಕ್ಕಳು ಯಕ್ಷಗಾನ ನೋಡದೆ ಹಿಂದಿರುಗುವುದು, ಸಭಾ ಕಾರ್ಯಕ್ರಮಗಳಿದ್ದಲ್ಲಿ ಅಂಥಹ ಪ್ರದರ್ಶನಗಳಿಗೆ ಬಾರದಿರುವುದು ಇತ್ತೀಚಿನ ದುರಂತಮಯ ಬೆಳವಣಿಗೆ. ಅತಿಯಾದರೆ ಅಮೃತವೂ ವಿಷವೆಂಬ ನಾಣ್ಣುಡಿಯನ್ನು ಬಲ್ಲ ಎಲ್ಲ ಕಲಾಪ್ರೇಮಿಗಳು, ಸಂಘಟಕರು ತಕ್ಷಣ ಕಾರ್ಯಪ್ರವೃತ್ತರಾಗಿ, ಯಕ್ಷಗಾನವನ್ನು ಹಿಂಸೆಯಿಲ್ಲದೆ, ಸಭ್ಯರೀತಿಯಿಂದ ಸವಿಯುವ ಅವಕಾಶವನ್ನು ಮಾಡಿಕೊಡಲಿ ಎಂಬುದು ನನ್ನ ಕಳಕಳಿಯ ಪ್ರಾರ್ಥನೆ.