Monday, November 9, 2009

ಬೆಂಗಳೂರಿನ ಮಳೆಗಾಲದ ಕೊನೆಯ ಪ್ರಸಂಗ, ನಿರಾಸೆಯ ನಡುವೆ ಭರವಸೆಯ ಮಿಂಚು




ಹೇರಂಜಾಲು ಸಂಯೋಜನೆಯ ಕಾರ್ತವೀರ್ಯ-ಭಾರ್ಗವ ವಿಜಯ-ದ್ರೌಪದಿ ವಸ್ತ್ರಾಪಹಾರ-ಗದಾಯುದ್ಧ

ಕಾರ್ತವೀರ್ಯ ಪ್ರಸಂಗದಲ್ಲಿ ಚಿಟ್ಟಾಣಿಯವರು ಮೊದಲನೆಯ ಕಾರ್ತವೀರ್ಯನಾಗಿ ನಿರೀಕ್ಶೆಗೆ ಮೀರಿದ ಪ್ರದರ್ಶನ ನೀಡಿ, ಯಕ್ಶರಂಗದಲ್ಲಿ ಚಿಟ್ಟಾಣಿ ಒಂದು ವಿಸ್ಮಯ ಎಂಬ ಮಾತಿಗೆ ಈ ಇಳಿವಯಸ್ಸಿನಲ್ಲೂ ಪುರಾವೆ ಒದಗಿಸಿದರು. ಚಿಟ್ಟಾಣಿ ರಂಗದಿಂದ ನಿರ್ಗಮಿಸಿದ ನಂತರ ರಂಗ ನೀರಸ. ಕೊಂಡದಕುಳಿ ರಾವಣನಾಗಿ ವಿಫಲ. ಖಳಕುಲೇಶ್ವರ ನಗುತ ಎಂಬ ಅಬ್ಬರದ ರಾವಣನ ಪ್ರವೇಶದಲ್ಲೂ ಕೊಂಡದಕುಳಿಯವರು ಯಾವ ಪ್ರಭಾವವನ್ನೂ ಬೀರಲಿಲ್ಲ. ’ದೀಪಾವಳಿ, ದಿವಾಳಿ’ ಮುಂತಾದ ಶಬ್ದ ಪ್ರಯೋಗ ಮಾಡಿದ ಕೊಂಡದಕುಳಿಯವರು ತಮ್ಮ ಹಾಸ್ಯಕ್ಕೆ ತಾವೇ ನಕ್ಕು ರಂಗಾಭಾಸ ಮಾಡಿದ್ದು ಶೋಚನೀಯ. ಎರಡನೆಯ ಕಾರ್ತವೀರ್ಯ (ಕೋಡಿ ವಿಶ್ವನಾಥ?)ನ ಪಾತ್ರ ಹವ್ಯಾಸಿ ಕಲಾವಿದರ ಮಟ್ಟಕ್ಕೂ ಏರಲಿಲ್ಲ. ಈ ಪಾತ್ರಧಾರಿ ಹೆಚ್ಚೆಂದರೆ ದೇವೇಂದ್ರ ಅಥವಾ ಕ್ರುತವೀರ್ಯ ಇತ್ಯಾದಿ ಪೋಶಕ ಪಾತ್ರಗಳಿಗೆ ಲಾಯಖ್ಖು. ಕಲಾವಿದನ ತಪ್ಪಲ್ಲ. ಸಂಘಟಕರು ಯೋಚಿಸಬೇಕು. ಅರುವತ್ತನಾಲ್ಕು ಕಲಾವಿದರ ಸಮಾವೇಶದಲ್ಲಿ ಈ ಪಾತ್ರ ಮಾಡಬಲ್ಲ ಸಮರ್ಥ ವೇಶಧಾರಿ ಇರಲಿಲ್ಲವೇ? ಈ ಪ್ರಸಂಗದಲ್ಲಿ ಭಾಗವತರಾಗಿ ಕೊಳಗಿ ಮತ್ತು ಹೇರಂಜಾಲು ಸಂಪೂರ್ಣ ವಿಫಲರಾದರು. ಕಾಳಿಂಗ ನಾವಡ ಹಾಗೂ ಧಾರೇಶ್ವರರು ಮೆರೆಸಿದ ಈ ಪ್ರಸಂಗವನ್ನು ಕಳೆಗಟ್ಟಿಸುವ ಹೊಸ ಭಾಗವತರಿಗೆ ರಂಗ ಮತ್ತು ಪ್ರೇಕ್ಶಕ ವರ್ಗ ಕಾದಿದೆ. ಹೇರಂಜಾಲು ಅವರ ಧ್ವನಿಯ ಮುಂದೆ ಕೊಳಗಿಯವರ ಧ್ವನಿ ಕೇಳಿಸಲೇ ಇಲ್ಲ.

ಸಮಯದ ಕೊರತೆಯಿಂದ ಭಾರ್ಗವ ವಿಜಯ ಪ್ರಸಂಗ ಕರಪತ್ರಕ್ಕೆ ಸೀಮಿತವಾಯಿತು. ಯಾವ ಪ್ರೇಕ್ಶಕನಿಗೂ ಆ ಪ್ರಸಂಗ ಬೇಕಾಗಿರಲಿಲ್ಲ ಎಂಬುದು ಬೇರೆ ಮಾತು. ಕಾರ್ತವೀರ್ಯ ಪ್ರಸಂಗದ ನಡುವೆ ನಲುವತ್ತೈದು ನಿಮಿಶಗಳ ಸಭಾ ಕಾರ್ಯಕ್ರಮ. ಬೆಂಗಳೂರು ಯಕ್ಷಗಾನ ಪ್ರದರ್ಶನಗಳಲ್ಲಿ ಇದು ನಿತ್ಯ ಗೋಳು. ಯಕ್ಶಗಾನ ಕನ್ನಡದ ಗಂಡು ಕಲೆ, ಅದ್ಭುತ ಕಲೆ ಎಂದು ಯಾರಿಂದಲೋ ಹೇಳಿಸುವುದು, ತಾಳ್ಮೆ ತಪ್ಪಿದ ಪ್ರೇಕ್ಶಕರ ಚಪ್ಪಾಳೆಯನ್ನು ಪ್ರೋತ್ಸಾಹವೆಂದು ಸಂಘಟಕರು ಬೀಗುವುದು.. ಇದಕ್ಕೆಲ್ಲಿಯ ಕೊನೆ?







ದ್ರೌಪದಿ ವಸ್ತ್ರಾಪಹಾರ ಅಮ್ಮಣ್ಣಾಯರಿಗೇ ಮೀಸಲಾದ ಪ್ರಸಂಗ. ಈ ಪ್ರಸಂಗದಲ್ಲಿ ಅವರಂತೆ ಹಾಡುವ ಭಾಗವತರಿಲ್ಲ. ಅಮ್ಮಣ್ಣಾಯರು ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲವಾದರೂ ಅವರ ಹಾಡುಗಾರಿಕೆ ಅವರದೇ ದಾಖಲೆಗಳಿಗಿಂತ ಹಿಂದೆ ಉಳಿಯಿತು. ಉಳಿದ ಭಾಗವತರಿಗೆ ಈ ಪ್ರಸಂಗದಲ್ಲಿ ಈ ಮಟ್ಟವನ್ನು ಮುಟ್ಟುವುದೂ ಸಾಧ್ಯವಿಲ್ಲ. ಆದ್ದರಿಂದ ಭಾಗವತಿಕೆ ಸಫ಼ಲ. ಕೋಳ್ಯೂರು ಅವರ ದ್ರೌಪದಿ ಉತ್ಕೃಷ್ಟ. ಸುನ್ನಂಬಳ ಅವರ ಕೌರವ ಪಾತ್ರೋಚಿತವಾಗಿ ಕಳೆಗಟ್ಟಿತ್ತು. ಮಧೂರು ನಾವಡರ ದುಶ್ಯಾಸನ ಸಮಯದ ಕೊರತೆಯ ನಡುವೆಯೂ ಆಕರ್ಶಕವಾಗಿ ಮೂಡಿ ಬಂತು.





ಕೊನೆಯ ಪ್ರಸಂಗ ಗದಾಯುದ್ಧ ಆರಂಭವಾದಾಗ ಬೆಳಗಿನ ಜಾವ ನಾಲ್ಕೂವರೆ. ಯುವ ಭಾಗವತರಾದ ರಾಘವೆಂದ್ರ ಆಚಾರಿ ಮತ್ತು ಸುಬ್ರಮಣ್ಯ ಆಚಾರಿಯವರ ದ್ವಂದ್ವ ಗಾಯನದಲ್ಲಿ ಗೋಡೆಯವರ ಮೊದಲನೆಯ ಕೌರವ ರಸವತ್ತಾಗಿ ಮೂದಿ ಬಂತು. ಗೋಡೆಯವರು ಎಲ್ಲಾ ಪದ್ಯಗಳನ್ನು ಎತ್ತುಗಡೆ ಮಾಡಿ ಯುವ ಭಾಗವತರಿಗೆ ನೆರವಾದರು. ಯಕ್ಶರಂಗದಲ್ಲಿ ತಾರೆಯಾಗಿ ಮಿನುಗುವ ಎಲ್ಲ ಲಕ್ಶಣಗಳು ರಾಘವೇಂದ್ರ ಆಚಾರಿಯವರಲ್ಲಿದೆ. ಹಾಗಾಗಲಿ ಎಂಬ ಹಾರೈಕೆಯೊಂದಿಗೆ..

Tuesday, September 15, 2009

ಚಿಟ್ಟಾಣಿ ಅರುವತ್ತು ವರುಶಗಳ ರಂಗಾನುಭವ ಸಂಭ್ರಮ - ಸಂಧಾನ ವಿಫಲವಾಯ್ತೇಕೆ?

ರವೀಂದ್ರ ಕಲಾಕ್ಶೇತ್ರದಲ್ಲಿ ಇರುವೆಯೂ ಕಾಲಿಡಲಾರದಶ್ಟು ಜನಸಾಗರ. ತಡವಾಗಿ ಬಂದವರಿಗೆ ನಿಂತು ನೋಡುವುದಕ್ಕೂ ಅವಕಾಶವಿಲ್ಲ. ಚಿಟ್ಟಾಣಿ ರಂಗಪ್ರವೇಶದ ಅರವತ್ತನೇ ವರುಶದ ಸಂಭ್ರಮ, ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತ್ತು. ಬಹುಶ: ಯಕ್ಶಗಾನ ಕಾಲಾವಿದರಲ್ಲಿ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಪಡೆದ, ಯಕ್ಶಗಾನಕ್ಕೆ ಅತ್ಯಂತ ಹೆಚ್ಚಿನ ಜನರನ್ನು ಸೆಳೆದ ಕಲಾವಿದ ಚಿಟ್ಟಾಣಿ.

ಇಂಥಹ ಅಪೂರ್ವ ಕಾರ್ಯಕ್ರಮದಂದು ಚಿಟ್ಟಾಣಿಯವರ ಸಂಧಾನದ ಕೃಶ್ಣ ಪಾತ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೋ ಎಂಬ ಅಳುಕು ಕಲಾಭಿಮಾನಿಗಳಿಗಿತ್ತು. ಇಂಥಹ ಸಂದರ್ಭಗಲಲ್ಲಿ ಕಲಾವಿದ ಅದ್ಭುತ ಪ್ರದರ್ಶನ ನೀಡುವುದೂ ಉಂಟು. ದುರದೃಶ್ಟವಶಾತ್ ಅಂದು ಪ್ರದರ್ಶನ ವಿಫಲವಾಯ್ತು. ಚಿಟ್ಟಾಣಿಯವರೂ ಮಿಂಚಲಿಲ್ಲ. ಶಶಿಕಾಂತ ಶೆಟ್ಟಿಯವರ ದ್ರೌಪದಿಯ ಪಾತ್ರ ಮಾತ್ರ ಯಶಸ್ವಿಯಾಯ್ತು. ಆರಂಭದ ಕೃಶ್ಣನಾಗಿ ಕಾಣಿಸಿಕೊಂಡ ಕಣ್ಣಿ ಕೃಷ್ಣನ ಪ್ರವೇಶದಲ್ಲೇ ನಿರಾಸೆ ಮೂಡಿಸಿದರು. ಯಾಜಿಯವರ ಕೌರವ 'ಕಡಿಮೆಯಲ್ಲ, ಹೆಚ್ಚಲ್ಲ'. ಬಹುಶ: ಅದೇ ಯಾಜಿಯವರ ವಿಶೇಷತೆ!. ಚಂದ್ರಹಾಸ ಹುಡುಗೋಡರ ಭೀಮ 'ಭೀಮಾಸುರ' ನಂತೆ ತೋರಿ ಬಂತು.

ಕೊಳಗಿಯವರ ಭಾಗವತಿಕೆಯ ಬಗ್ಗೆ ಎರಡು ಮಾತು. ಸಂಧಾನ ಪ್ರಸಂಗ ಎಂಥಹ ಭಾಗವತನಿಗೂ ಸವಾಲೆ. ಕೊಳಗಿಯವರ ಧ್ವನಿ ಶ್ರುತಿಗೂಡಲೂ ಇಲ್ಲ, ಪ್ರೇಕ್ಶಕರನ್ನು ತಟ್ಟಲೂ ಇಲ್ಲ. ಇನ್ನು ಚಿಟ್ಟಾಣಿಯವರ ಪಾತ್ರವನ್ನು 'ಉಟ್ಟಾವ್' ಮಾಡಲೂ ಇಲ್ಲ. ಭೀಮ ದ್ರೌಪದಿ ಸನ್ನಿವೇಶ ಎಂದೂ ಮುಗಿಯದ ಕನ್ನಡ ದೂರದರ್ಶನ ಧಾರವಾಹಿಯನ್ನು ನೆನಪಿಸಿತು. ಭಾಗವತನ ಸ್ಥಾನ ತೆರೆಮರೆಗೆ ಸರಿಯುತ್ತಿರುವ ಈ ಸಂಕ್ರಮಣ ಕಾಲದಲ್ಲಿ ಭರವಸೆ ಮೂದಿಸಿರುವ ರಾಘವೆಂದ್ರ ಆಚಾರಿಯವರಂಥಹ ಯುವ ಭಾಗವತರಿಗೆ ಅವಕಾಶ ಮಾಡಿ ಕೊಡುವುದರ ಬಗ್ಗೆ ಸಂಘಟಕರು ಯೋಚಿಸಬೇಕಿದೆ.

ಚಿಟ್ಟಾಣಿಯವರಿಗೆ ಅರುವತ್ತರ ರಂಗಸಂಭ್ರಮದ 'ಸವಿ'ಸಮಯದಲ್ಲಿ ಶುಭಾಶಯಗಳು.

Sunday, August 2, 2009

ಯಕ್ಷಪ್ರಿಯರ ಮನತಣಿಸಿದ 'ಜಾಂಬವತಿ ಕಲ್ಯಾಣ'




ಜಾಂಬವತಿ ಕಲ್ಯಾಣ ಬಡಗು ತಿಟ್ಟಿನಲ್ಲಿ ಅಪರೂಪವಾಗಿ ಪ್ರದರ್ಶಿತವಾಗುವ ಪ್ರಸಂಗ. ಈ ಪ್ರಸಂಗದಲ್ಲಿ ಹೆಸರು ಮಾಡಿದ ಪ್ರಸಿದ್ಧ ಕಲಾವಿದರ ಹೆಸರು ಕಾಣಸಿಗದು. ಶಂಭು ಹೆಗಡೆ, ಚಿಟ್ಟಾಣಿಯವರು ಈ ಪ್ರಸಂಗದಲ್ಲಿ ಪಾತ್ರ ವಹಿಸಿದ ಕುರಿತು ಹೆಚ್ಚೇನೂ ಮಾಹಿತಿಯಿಲ್ಲ. ಬಹುಶ ಚಿಟ್ಟಾಣಿಯವರು ಜಾಂಬವ ಮತ್ತು ಕೃಷ್ಣನ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಕ್ಕೂ ಸಾಕು. ರಸಮಯ ಸನ್ನಿವೇಶಗಳಿಂದೊಡಗೂಡಿದ ಈ ಪ್ರಸಂಗ ಎಲೆಮರೆಯ ಕಾಯಿಯಂತೆಯೇ ಇರುವುದಕ್ಕೆ ಕಾರಣ ತಿಳಿಯದು.

ಕೆಲವು ವರ್ಷಗಳ ಹಿಂದೆ ಕರ್ಕಿ ಮೇಳದವರು ಈ ಪ್ರಸಂಗವನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿದ್ದರು. ಪೆರ್ಡೊರು ಮತ್ತು ಸಾಲಿಗ್ರಾಮ ಮೇಳಗಳ ತಿರುಗಾಟದಲ್ಲಿ ಈ ಪ್ರಸಂಗ ಅಪರೂಪಕ್ಕೆ ಕಾಣಿಸಿಕೊಳ್ಳುವುದುಂಟು. ಕೊಂಡದಕುಳಿ ಬಳಗದವರಿಂದ ಬೆಂಗಳೂರಿನಲ್ಲಿ ಪ್ರದರ್ಶಿತವಾದ, ಜಾಂಬವತಿ ಕಲ್ಯಾಣ ಯಕ್ಷರಸಿಕರಿಗೆ ರಸದೌತಣವಾಯ್ತು.

ಬಲರಾಮನ ಪಾತ್ರದಲ್ಲಿ ವಿಶ್ಣು ಭಟ್ಟರು ತಮ್ಮ ಮಾತುಗಾರಿಕೆ, ಭಾವನೆಗಳ ಅಭಿವ್ಯಕ್ತಿಯಲ್ಲಿ ಮಿಂಚಿದರು. ಬಲರಾಮ ಮತ್ತು ಕೃಷ್ಣರ ಸನ್ನಿವೇಶಗಳು ಅತ್ಯಂತ ಸೊಗಸಾಗಿ ಮೂಡಿಬಂತು. ತೋಟಿಯವರ ಕೃಷ್ಣನ ಪಾತ್ರ ಈ ಸನ್ನಿವೇಶದಲ್ಲೂ ಮನೋಜ್ನವಾಗಿತ್ತು. ಕೃಷ್ಣ ಯಾದವರೊಡನೆ ಪ್ರಸೇನನನ್ನು ಹುಡುಕುತ್ತ ಹೊರಟ ದೃಶ್ಯಗಳು ಸೊಗಸಾಗಿದ್ದವು.

ನಾರದನ ಪಾತ್ರಧಾರಿಯು ಬಲರಾಮನಲ್ಲಿ ' ಈ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುವ ಕೆಲಸ ನನಗೆ ಬೇಡ' ಎಮ್ಬ ಮಾತುಗಳನ್ನಾಡಿ ಅಭಾಸಕ್ಕೆ ಗುರಿಯಾದರು.

ಜಾಂಬವತಿ ಕಲ್ಯಾಣದಲ್ಲಿ ಬಹು ನಿರೀಕ್ಷೆಯ ಪದ್ಯವೆಂದರೆ ಕೃಷ್ಣ ಜಾಂಬವತಿಯನ್ನು ಕಾಣುವ ಸನ್ನಿವೇಶದ 'ಶರದರುತು ಪೌರ್ಣಮಿಯ ಉದಯಚಂದಿರ ಕಾಂತಿ' ಹಾಡು. ಈ ಪದ್ಯವನ್ನು ಭಾಗವತ ಪ್ರಸನ್ನ ಭಟ್ ಬಾಳ್ಕಲ್ ಬಹಳ ಸೊಗಸಾಗಿ ಹಾಡಿದರು. ಈ ಹಾಡಿಗೆ ಕೃಷ್ಣನಾಗಿ ತೋಟಿಯವರ ಅಭಿನಯವೂ ಮನಮೋಹಕವಾಗಿತ್ತು. ಜಾಂಬವತಿಯ ಪಾತ್ರ ಮಾತ್ರ ಸೊರಗಿತು.

ಜಾಂಬವನಾಗಿ ಕೊಂಡದಕುಳಿಯವರು ಮಿಂಚಿದರು. ಜಾಂಬವನ ವೀರ ಮತ್ತು ಭಕ್ತಿ ರಸಗಳ ಅಭಿವ್ಯಕ್ತಿ ಮನಸೆಳೆಯಿತು. ತೊಟಿಮನೆಯವರ ಕೃಷ್ಣ ಕೂಡ ಜಾಂಬವನೊಂದಿಗೆ ಅಷ್ಟೇ ಸಮರ್ಥವಾಗಿ ಮೆರೆಯಿತು. ಕೊಂಡದಕುಳಿ, ತೋಟಿಯವರ ಜೋಡಿ ವೇಷಗಳು ಪ್ರೇಕ್ಷಕರಿಗೆ ರಸಗವಳ. ಜಾಂಬವನ ವೇಶ ಮತ್ತು ಮುಖವರ್ಣಿಕೆ ಬಹಳ ಸೊಗಸಾಗಿತ್ತು.

ಪ್ರಸನ್ನ ಭಟ್ಟ್ ಬಾಳ್ಕಲ್ ಅವರ ಭಾಗವತಿಕೆಯೂ ಪ್ರಸಂಗ ಕಳೆಗಟ್ಟಲು ಕಾರಣವಾಯ್ತು. ಕೆಲವು ಪದ್ಯಗಳು ಅತ್ಯಂತ ಭಾವಪೂರ್‍ಣವಾಗಿ ಮೂಡಿಬಂದವು. ಪೌರಾಣಿಕ ಪ್ರಸಂಗಗಳನ್ನು ಮತ್ತೆ ಜನಮಾನಸಕ್ಕೆ ತಲಪಿಸುತ್ತಿರವ ಸ್ತುತ್ಯರ್ಹ ಕೆಲಸ ಮಾಡುತ್ತಿರುವ ಕೊಂಡದಕುಳಿ ಬಳಗಕ್ಕೆ ನಮನಗಳು.

Saturday, August 1, 2009

ಆರಕ್ಕೇರದ, ಮೂರಕ್ಕಿಳಿಯದ 'ಅಮರ ಕೃತಿಯ ಉತ್ಕೃಷ್ಟ ಪ್ರದರ್ಶನ, ಕೃಷ್ಣ ಸಂಧಾನ '


ಕೃಷ್ಣ ಸಂಧಾನ ಎಂಬ ಪ್ರಸಂಗದ ಹೆಸರು ಕೇಳಿದಾಗ ಮನಸ್ಸಿನಲ್ಲಿ ಮೂಡುವುದು ಶಂಭು ಹಗಡೆಯವರ ಕೃಷ್ಣನ ಪಾತ್ರವೇ. ಇಡಗುಂಜಿ ಮೇಳದಲ್ಲಿ ಮೆರೆದ, ಒಂದು ಕಾಲದಲ್ಲಿ ಕೃಷ್ಣ ಸಂಧಾನ ಎಂದರ ಇಡಗುಂಜಿ ಮೇಳದತ್ತಲೇ ಬೊಟ್ಟು ಮಾಡಿ ತೋರಿಸುವಷ್ಟರ ಮಟ್ಟಿಗೆ ಆ ಪ್ರಸಂಗ ಶಂಭು ಹಗಡೆಯವರ ಮೂಲಕ ಜನಪ್ರಿಯವಾಯಿತು. ತೆಂಕು ತಿಟ್ಟಿನಲ್ಲಿ ಬಹುತೇಕ ತಾಳಮದ್ದಲೆಗೇ ಈ ಪ್ರಸಂಗ ಮೀಸಲು. ಇಂದೂ ಕೂಡ ಇದು ತಾಳಮದ್ದಲೆಯ ಬಹು ಬೇಡಿಕೆಯ ಪ್ರಸಂಗಗಳಲ್ಲೊಂದು. ಖ್ಯಾತ ಯಕ್ಶಗಾನ ಕಲಾವಿದ, ವಿಮರ್ಷಕ ಪ್ರಭಾಕರ ಜೋಶಿಯವರು ಈ ಪ್ರಸಂಗದ ಬಗ್ಗೆ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.

ಯಕ್ಶಗಾನದಲ್ಲಿ ನಾನು ನೋಡಿದ ಸಂಧಾನದ ಕೃಷ್ಣನ ಪಾತ್ರಗಳೆಂದರ ಶಂಭು ಹೆಗಡೆ, ಚಿಟ್ಟಾಣಿ, ಕೊಂಡದಕುಳಿ, ಗೋಪಾಲಾಚಾರಿ ಮತ್ತು ವಾಸುದೇವ ಸಾಮಗರದು.

ಬೆಂಗಳೂರಿನಲ್ಲಿ ಕೊಂಡದಕುಳಿ ಪ್ರತಿಷ್ಟಾನ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ಕೃಷ್ಣ ಸಂಧಾನ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ನೆಬ್ಬೂರರ ಭಾಗವತಿಕೆ, ಕೊಂಡದಕುಳಿಯವರ ಕೃಷ್ಣ, ಥಂಡಿಮನೆಯವರ ಕೌರವ, ತೋಟಿಮನೆಯವರ ಭೀಮ, ಯಲಗುಪ್ಪ ಅವರ ದ್ರೌಪದಿ, ಶಿರಳಗಿ ತಿಮ್ಮಪ್ಪ ಹೆಗಡೆಯವರ ಧರ್ಮರಾಯ, ವಿಷ್ಣು ಭಟ್ಟರ ಸಂಜಯ - ಹೀಗೆ ಘಟಾನುಘಟಿ ಕಲಾವಿದರ ಸಂಯೋಗವೂ ಈ ಪ್ರಸಂಗಕ್ಕೆ ಒದಗಿ ಬಂದಿತ್ತು. ಪ್ರದರ್ಶನ ನಿರೀಕ್ಶೆಯ ಮಟ್ಟಕ್ಕೆ ಮುಟ್ಟದೆ, 'ಅಡ್ಡಿಯಿಲ್ಲ' ಎನಿಸಿಕೊಂಡಿತು. ಕೊಂಡದಕುಳಿಯವರು ಕೃಷ್ಣನ ಪಾತ್ರವನ್ನು ಇನ್ನೂ ಚೆನ್ನಾಗಿ ಮಾಡಿರುವುದನ್ನು ನಾನು ನೋಡಿದ್ದರಿಂದಲೋ ಏನೋ ಈ ಪ್ರದರ್ಶನದ ಅವರ ಕೃಷ್ಣನ ಪಾತ್ರದ ಬಗ್ಗೆ ಹೆಚ್ಚು ಬರೆಯಲು ಮನಸ್ಸಾಗುತ್ತಿಲ್ಲ. ಬಂದನು ದೇವರ ದೇವರ ಪದ್ಯದ ಚರಣವೊಂದಕ್ಕೆ ಹೊಸಬಗೆಯ ನೃತ್ಯವನ್ನು ಅಳವಡಿಸಿದ್ದು ಶ್ಲಾಘನೀಯ. ನೋಡಿದೆಯ ವಿಧುರ ಪದ್ಯಕ್ಕೆ ಅತ್ಯುತ್ತಮ ಅಭಿನಯ ಮತ್ತು ಕುಣಿತಗಳಿಂದ ರಂಜಿಸಿದರು. ವರ ಗದ್ದುಗೆಯ, ಚರಣ ಎನಗೆ ಪದ್ಯಗಳಿಗೆ ಅಭಿನಯ, ಕುಣಿತ ಸಾಲದು. 'ತುಂಬಿತಾಪುರ' ಎಂಬ ಪದ್ಯಕ್ಕೆ ವಿದುರ ಆಶ್ಚರ್ಯಚಕಿತನಾಗಬೇಕೆ ಹೊರತು ಕೃಷ್ಣನಲ್ಲ! ಈ ದೃಶ್ಯದಲ್ಲಿ ಕೊಂಡದಕುಳಿಯವರು ಕೃಷ್ಣನಾಗಿ ವಿಸ್ಮಯತೆಯ ಭಾವಪ್ರಕಟನೆ ಮಾಡಿರುವುದರ ಔಚಿತ್ಯ ಅರ್ಥವಾಗಲಿಲ್ಲ.

ಅಪರೂಪವಾಗಿ, ಉತ್ತಮ ಕಲಾವಿದರ ಕೂಡುವಿಕೆಯಿಂದ ಸಂಯೋಜನೆಗೊಂಡ ಈ ಪ್ರಸಂಗ ಉತ್ಕೃಷ್ಟತೆಗೇರದ್ದಕ್ಕೆ ಕಾರಣಗಳೆನಿರಬಹುದು ಎಂದು ಚಿಂತಿಸಿದಾಗ, ಮೊದಲನೆಯದಾಗಿ ಎದ್ದು ಕಾಣುವುದು ಹಿಮ್ಮೇಳ. ಪ್ರಸನ್ನ ಭಟ್, ಕೊಳಗಿ ಮತ್ತು ನೆಬ್ಬೂರರ ಧ್ವನಿ ಪ್ರೇಕ್ಶಕರನ್ನು ತಾಕಲೇ ಇಲ್ಲ. ನೆಬ್ಬೂರರು ಬಂದ ನಂತರ ಸ್ವಲ್ಪ ಸುಧಾರಣೆ ಕಂಡು ಬಂದರೂ ಅಭಿಮಾನಿಗಳ ಹೊರತಾಗಿ ಸಾಮಾನ್ಯ ಪ್ರೇಕ್ಶಕರನ್ನು ಸೆಳೆಯುವಲ್ಲಿ ಭಾಗವತಿಕೆ ವಿಫಲವಾಯಿತೆಂದೇ ಹೇಳಬಹುದು. ಬಹುಶ ಎ ಡಿ ಎ ರಂಗಮಂದಿರದ ಕಳಪೆ ಧ್ವನಿವರ್ಧಕ ವ್ಯವಸ್ಥೆಯೂ ಇದಕ್ಕೆ ಕಾರಣವಿರಬಹುದು. ಸಾಂಪ್ರದಾಯಿಕ ಪಾಂದವರ ಒಡ್ಡೋಲಗವನ್ನು ನಿರೀಕ್ಶಿಸಿದ್ದ ಪ್ರೇಕ್ಶಕರಿಗೆ, ಧರ್ಮರಾಯನ ನೀರಸ ಪ್ರವೇಶ ಭಾರೀ ನಿರಾಸೆ ಮೂಡಿಸಿತು. ಕೃಷ್ಣನ ಪ್ರವೇಶ ಕ್ರಮವೂ ಬಡಗಿನ ಸಾಂಪ್ರದಾಯಿಕ ಪ್ರವೇಶವಲ್ಲ. ಕೆಲವು ವರ್ಷಗಳ ಹಿಂದೆ ಪುತ್ತಿಗೆ ರಘುರಾಮ ಹೊಳ್ಳರು ಬೆಂಗಳೂರಿನ ಪ್ರದರ್ಷನವೊಂದರಲ್ಲಿ ಕೃಷ್ಣನ ತೆಂಕುತಿಟ್ಟಿನ ಸಾಂಪ್ರದಾಯಿಕ ಒಡ್ಡೋಲಗವನ್ನು ಮಾಡಿಸಿದ್ದರು. ಬಡಗು ತಿಟ್ಟಿನಲ್ಲೂ ಇಂಥಹ ಸಾಂಪ್ರದಾಯಿಕ ಒಡ್ಡೋಲಗವಿದ್ದರೂ ಇಂದು ಅದನ್ನು ಮಾಡಿ ತೋರಿಸುವವರೇ ಇಲ್ಲ ಎಂಬಂತಾಗಿದೆ. ಶಂಭು ಹೆಗಡೆಯವರೂ ಕೂಡಾ ಈ ಸಂಪ್ರದಾಯವನ್ನು ಬಿಟ್ಟಿರುವುದು ದು:ಖದ ವಿಶಯ. ಶಂಭು ಹೆಗಡೆಯವರ ಕೃಷ್ಣನ ಅನುಕರಣೆ ಮಾಡುವಾಗ ಸಹಜವಾಗಿಯೆ ಇಂದಿನ ಕಲಾವಿದರು ಇದರ ಕುರಿತು ಚಿಂತಿಸಲು ಅವಕಾಶವಾದರೂ ಎಲ್ಲಿದೆ?

ದ್ರೌಪದಿಯ ಪಾತ್ರಕ್ಕೆ ಯಲಗುಪ್ಪರು ಇನ್ನೂ ತಯಾರಾಗಿಲ್ಲ. ತೋಟಿಯವರ ಭೀಮ ಉತ್ತಮವಾಗಿತ್ತಾದರೂ, ಕೋಮಲಾಂಗಿ ಕೇಳೆ ಪದ್ಯಕ್ಕೆ ಅಭಿನಯ, ಕುಣಿತ ಸಾಲದು. ವಿದುರನ ವೇಶವನ್ನು ವಿಶ್ಣು ಭಟ್ಟರು ಶುದ್ಧ ಯಕ್ಶಗಾನ ರೀತಿಯಲ್ಲಿ ಮಾಡಿರುವುದು ಸ್ವಾಗತಾರ್ಹ. ಬಹುತೇಕ ವಿದುರರು ಇಂದು ಪೇಟಾ ಧರಿಸಿ ನಾಟಕದ ವಿದುರರಾಗುತ್ತಿರುವುದು ದುರ್ದೈವ. ಆದರೆ ವಿದುರನ ಪಾತ್ರ ಉತ್ತಮ ವೇಶಕ್ಕಷ್ಟೇ ಸೀಮಿತವಾಯಿತು. ಥಂಡಿಯವರ ಕೌರವನಿಗೆ ಇನ್ನೂ ಹೆಚ್ಚಿನ 'ಗತ್ತು' ಅವಶ್ಯ. ಕೌರವನ ಆಸ್ಥಾನದಲ್ಲಿ ನಡೆದ ಯಲಗುಪ್ಪರ ನಾಟ್ಯ ಪ್ರೇಕ್ಷಕರನ್ನು ರಂಜಿಸಿತಾದರೂ, ಈ ನ್ರುತ್ಯದ ಸಾಂಪ್ರದಾಯಿಕತೆ ಪ್ರಶ್ಣಾರ್ಹ.

ಒಟ್ಟಂದದ ಕುರಿತು ಹೇಳುವುದಾದರೆ ಈ ಪ್ರದರ್ಷನ ಟೆಂಟ್ ಆಟದ ಮಟ್ಟದಲ್ಲೇ ಉಳಿಯಿತು. ಅಮರ ಕೃತಿಯ ಉತ್ಕೃಷ್ಟ ಪ್ರದರ್ಶನ ಎಂಬ ಹೇಳಿಕೆಯನ್ನು ಕರಪತ್ರದಿಂದ (ಪ್ರಚುರಪಡಿಸಿದಂತೆ) ಎತ್ತಿಕೊಳ್ಳಲಾಗಿದೆ.

Sunday, July 26, 2009

ಕೊಂಡದಕುಳಿಯವರ ಅಮೋಘ ಭರತನ ಪಾತ್ರದಲ್ಲಿ ಮೆರೆದ ಧರ್ಮಾಂಗದ ದಿಗ್ವಿಜಯ

ಪಾತ್ರಕೊಪ್ಪುವ ಕುಣಿತ, ನೃತ್ಯ, ಮಾತು, ಹಾವ ಭಾವಗಳಿಂದ ಕೊಂಡದಕುಳಿಯವರು ಭರತನಾಗಿ ಯಕ್ಷಲೋಕವನ್ನು ಧರೆಗಿಳಿಸಿದರು. ಧರ್ಮಾಂಗದನಾಗಿ ಗೋಪಾಲಾಚಾರಿಯವರು ಉತ್ತಮ ಕುಣಿತಗಳಿಂದ ರಂಜಿಸಿದರೂ, ಅಭಿನಯದ ಕೊರತೆ ಎದ್ದು ಕಾಣುತ್ತಿತ್ತು. ಧರ್ಮಾಂಗದನ ಅಪರೂಪದ ಪ್ರಯಾಣ ನೃತ್ಯ ಗಮನ ಸೆಳೆಯಿತು. ಯಕ್ಶಗಾನದಲ್ಲಿ ಇತ್ತೀಚೆಗೆ ಮರೆಯಾಗುತ್ತಿರುವ ಯುದ್ಧ ನೃತ್ಯ, ಪ್ರಯಾಣ ನೃತ್ಯಗಳನ್ನು ಬಳಸುವುದು ನಿಜಕ್ಕೂ ಸ್ವಾಗತಾರ್ಹ. ಬಲಿಯಾಗಿ ಗುಡಿಗಾರರು ಉತ್ತಮ ಕುಣಿತದಿಂದ ಗಮನ ಸೆಳೆದರು. ಗುಡಿಗಾರರ ಮಾತುಗಾರಿಕೆ ಮಾತ್ರ ಬಲಿಯ ಪಾತ್ರಕ್ಕೆ ಲಘುವಾಗಿ ತೋರಿಬಂತು.

ಧಾರೇಶ್ವರರು ಮತ್ತೆ ಭಾರೀ ಯಕ್ಷ ರಸಾನುಭವವನ್ನು ನೀಡಿದರು. ಪ್ರಸಂಗ ಮುಂದುವರಿಯುತ್ತಿದ್ದಂತೆ ಧಾರೇಶ್ವರರರ ಭಾಗವತಿಕೆಗೆ ಕಾವೇರಿತು. ಭರತ, ಧರ್ಮಾಂಗದ, ಬಲಿ - ಈ ಮೂರೂ ಪಾತ್ರಗಳನ್ನು ಸಮರ್ಥವಾಗಿ ದುಡಿಸಿಕೊಂಡ ಧಾರೇಶ್ವರರು ಪ್ರಸಂಗದ ಯಶಸ್ಸಿಗೆ ಕಾರಣರಾದರು. ಸಾಹಿತ್ಯ ಸ್ಪಷ್ಟತೆ, ಭಾವಕ್ಕನುಗುಣವಾಗಿ ಪದ್ಯದ ಶಬ್ಧಗಳಿಗೆ ನೀಡುವ ಒತ್ತು, ಅಚ್ಚುಕಟ್ಟಾದ ಆಕರ್ಷಕ ಸ್ವರವಿನ್ಯಾಸ, ಭಾವಕ್ಕೊಪ್ಪುವ ರಾಗಗಳ ಬಳಕೆ ಧಾರೇಶ್ವರರ ವಿಶೇಷತೆ. ಕೇವಲ ವೀರ ರಸದ ಪ್ರಸಂಗದಲ್ಲೂ ಧಾರೇಶ್ವರರು ಅತ್ಯಂತ ಪರಿಣಾಮಕಾರಿಯಾಗಿ ಹಾಡಬಲ್ಲರು ಎಂಬುದಕ್ಕೆ ಈ ಪ್ರದರ್ಶನ ನಿದರ್ಶನ.

ಬಹುಶ: ಕೊಂಡದಕುಳಿಯವರು ಭರತನ ಪಾತ್ರ ವಹಿಸದಿದ್ದರೆ ಈ ಪ್ರಸಂಗ ಈ ಮಟ್ಟಿನ ಯಶಸ್ಸನ್ನು ಕಾಣುತ್ತಿರಲಿಲ್ಲ ಎಂಬುದು ನನ್ನ ಭಾವನೆ. ಹಾಗಾಗಿಯೇ ಅವರ ಹೆಸರಿನ ತಲೆಬರಹದಡಿಯಲ್ಲಿ ಉಳಿದ ವಿವರಗಳು ಕಾಣಿಸಿಕೊಂಡಿವೆ. ಬೆಂಗಳೂರು ಯಕ್ಶ ಪ್ರೇಮಿಗಳಿಗೆ, ಅಪರೂಪದ, ಆಕರ್ಷಕ ಪ್ರದರ್ಷನ ನೀಡಿದ ಕಲಾವೃಂದಕ್ಕೆ,ಸಂಘಟಕರಿಗೆ ವಂದನೆಗಳು. ಅಂದ ಹಾಗೆ ಈ ಪ್ರದರ್ಶನ ನಡೆದದ್ದು ಬೆಂಗಳೂರಿನ ಯಕ್ಷಗಾನ ಸಂಚಾಲಕ ನೈಲಾಡಿ ಪ್ರಕಾಶ ಶೆಟ್ಟಿಯವರ ಹೃದಯ ಚಿಕಿತ್ಸೆಯ ಸಹಾಯಾರ್ಥವಾಗಿ. ಅವರು ಬೇಗನೆ ಚೇತರಿಸಿಕೊಳ್ಳುವಂತಾಗಲಿ ಎಂಬ ಹಾರೈಕೆಯೊಂದಿಗೆ..

Saturday, July 25, 2009

ಗಾಯನ ಗಾರುಡಿಗನ ಗಂಧರ್ವ ಗಾನದಲ್ಲಿ ಇತಿಹಾಸವಾದ ರುದ್ರಕೋಪ ಪ್ರದರ್ಶನ



ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪ್ರದರ್ಶನಗೊಂಡ ರುದ್ರಕೋಪ ಪ್ರಸಂಗದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ 'ಕೇಳಲು ಎರಡು ಕಿವಿಗಳು ಸಾಲದಾಯ್ತು, ನೋಡಲು ಎರಡು ಕಂಗಳು ಸಾಲದಾಯ್ತು'.

ರುದ್ರಕೋಪರಾಗಿ ಚಿಟ್ಟಾಣಿ ಮತ್ತು ಗೋಪಾಲಾಚಾರಿ, ಚಿತ್ರಾಕ್ಶಿಯಾಗಿ ನೀಲ್ಕೋಡ್, ರಕ್ತಜಂಘನಾಗಿ ಉಪ್ಪುಂದ, ರಕ್ತಕೇಶಿಯಾಗಿ ಗುಡಿಗಾರ, ಅಜ್ಜಿಯಾಗಿ ರಮೇಶ ಭಂಡಾರಿ, ದೂತನಾಗಿ ರವೀಂದ್ರ, ಭಾಗವತರಾಗಿ ಧಾರೇಶ್ವರ ಮತ್ತು ಕೊಳಗಿ, ಚೆಂಡೆಯಲ್ಲಿ ರಾಕೇಶ್ ಮಲ್ಯ ಮತ್ತು ಗುಂಡ, ಮದ್ದಳೆಯಲ್ಲಿ ಶ್ರೀಧರ ಭಂಡಾರಿ ಮತ್ತು ಸುನಿಲ್ ಭಂಡಾರಿ, ಚಂದ್ರಸೇನನಾಗಿ ವಿಶ್ವನಾಥ ಆಚಾರ್ಯ ಪ್ರೇಕ್ಶಕರಿಗೆ ಮರೆಯಲಾಗದ ರಸದೌತಣವನ್ನು ನೀಡಿದರು.

ಸರ್ವಕಲಾವಿದರೂ ಸರ್ವಾಂಗ ಸುಂದರ ಪ್ರದರ್ಶನ ನೀಡಿದರೂ ಈ ಪ್ರದರ್ಶನದಲ್ಲಿ ಹೊಡೆದು ಕಾಣಿಸಿದ ಅಂಶ ಧಾರೇಶ್ವರರ ಭಾಗವತಿಕೆ. ಆ ದಿನ ಅದೆಲ್ಲಿಯ ಉತ್ಸಾಹವೋ, ಧಾರೇಶ್ವರರು ಗಂಧರ್ವ ಗಾನದ ಸವಿಯನ್ನು ಮೊಗೆಮೊಗೆದು ಉಣಬಡಿಸಿದರು. ರಕ್ತಕೇಶಿಯ ಅಬ್ಬರದ ಪ್ರವೇಶಕ್ಕೆ ತೆಂಕಿನ ಚೆಂಡೆ, ಚಕ್ರತಾಳದ ಝೇಂಕಾರಕ್ಕೆ ಧಾರೇಶ್ವರರು ಬಂದು ರಂಗ ಸಾರಥ್ಯ ವಹಿಸಿದಾಗ ಒಂದು ಮಾಯಾಲೋಕವೇ ನಿರ್ಮಾಣವಾಯಿತು. ಹಳೆ, ಹೊಸ ಶೈಲಿಗಳ ಮೋಹಕ ಕೊಲಾಜ್, ಸ್ವರದ ಸರ್ವಾಂಗ ಸುಂದರ ಬಳಕೆ, ಅನುಭವದ ಮೂಸೆಯಲ್ಲಿ ಪರಿಪಕ್ವಗೊಂಡ ರಂಗತಂತ್ರಗಳು, ಪ್ರೇಕ್ಶಕರನ್ನು ಅಕ್ಶರಶ: ಸಂಮೋಹಿನಿಗೊಳಪಡಿಸಿತು. ಕೆಲವು ಪದ್ಯಗಳಂತೂ ಯಕ್ಷಲೋಕವನ್ನೇ ಧರೆಗಿಳಿಸಿತು. ಆರಂಭದಲ್ಲಿ ಹಾಡಿದ ಕೊಳಗಿಯವರೂ ಒಟ್ಟೂ ಪ್ರಸಂಗ ಕಳೆಗಟ್ಟಲು ಕಾರಣರಾದರು. ಪ್ರಸಂಗದುದ್ದಕ್ಕೂ ಪ್ರೇಕ್ಷಕರು ತಲೆದೂಗಿದರು, ಭಾವೋತ್ಕರ್ಶದ ಅಲೆಯಲ್ಲಿ ಕಣ್ಣೀರು ಮಿಡಿದರು, ಯಕ್ಶಲೋಕದ ಸವಿಯನ್ನು ಕ್ಷಣ ಕ್ಷಣವೂ ಅನುಭವಿಸಿದರು.

ರುದ್ರಕೋಪ ಪ್ರಸಂಗದ ಸ್ಥಾಪಿತ 'ಎಲ್ಲೆಲ್ಲೂ ಸೊಬಗಿದೆ' ಪದ್ಯಕ್ಕೆ ಬದಲಾಗಿ ಧಾರೇಶ್ವರರು ಹೊಸ ಪದ್ಯವನ್ನು ಬಳಸಿ ಹೊಸ ಪರಿಣಾಮವನ್ನುಂಟುಮಾಡಿದರು. ನಾನು ಕರೆದೊಯ್ದ ಹೊಸಪ್ರೇಕ್ಶಕರೀರ್ವರು ಮುಂದಿನ ಪ್ರದರ್ಶನಗಳಿಗೆ ನಾವಿದ್ದೇವೆ ಎಂದು ಹೇಳಿರುವುದು ಬಹುಶ: ಈ ಪ್ರದರ್ಶನದ ಯಶಸ್ಸಿಗೆ ಸಾಕ್ಷಿ!

ಒಟ್ಟಿನಲ್ಲಿ ಯಕ್ಶಗಾನದ ಇತಿಹಾಸದಲ್ಲಿ , ಅದರಲ್ಲೂ ಮುಖ್ಯವಾಗಿ ಧಾರೇಶ್ವರ ಆತ್ಮವ್ರುತ್ತಾಂತದಲ್ಲಿ ಅಗತ್ಯವಾಗಿ ದಾಖಲಾಗಬೇಕಾದ ಪ್ರದರ್ಶನವಿದು. ಸಂಘಟಕರಾದ ಕಲಾವಿದ ಮಂಜುನಾಥ ಕಟ್ಕೆರೆ, ಸರ್ವ ಕಲಾವಿದರಿಗೆ, ಅಭಿನಂದನೆಗಳು, ಅಭಿವಂದನೆಗಳು. ಯಕ್ಶಗಾನಂ ಗೆಲ್ಗೆ!

Wednesday, July 22, 2009

ಭಸ್ಮಾಸುರ - ಒಂದು ಹರಕೆ ಮುಗಿಸಿದ ಅನುಭವ

ಪ್ರಸ್ತುತ ಕಲಾವಿದರಲ್ಲಿ ಭಸ್ಮಾಸುರನ ಪಾತ್ರವನ್ನು ದಕ್ಕಿಸಿಕೊಂಡ ಏಕಮಾತ್ರ ಕಲಾವಿದರೆಂದರೆ ಚಿಟ್ಟಾಣಿಯವರು. ಅತಿರಥ ಕಲಾವಿದರಾದ ಶಂಭು ಹೆಗಡೆ,ಗೋಡೆ , ಮಹಾಬಲ ಹೆಗಡೆ ಮತ್ತು ಇತ್ತೀಚಿನ ದಿನಗಳಲ್ಲಿ ಕೊಂಡದಕುಳಿ, ಕಣ್ಣಿ ಮುಂತಾದ ಕಲಾವಿದರಿಗೂ ಈ ಪಾತ್ರ ಒಲಿಯಲಿಲ್ಲ. ಇಂಥ ಕಾಲಘಟ್ಟದಲ್ಲಿ ಭಸ್ಮಾಸುರ ಪಾತ್ರದಲ್ಲಿ ಕೇಳಿ ಬರುತ್ತಿರುವ ಹೆಸರು ತೋಟಿಮನೆ ಗಣಪತಿ ಹೆಗಡೆಯವರದು.

ಭಸ್ಮಾಸುರನ ಪ್ರವೇಶದಲ್ಲಿ ಪ್ರೇಕ್ಶಕರಿಗೆ ರೋಮಾಂಚನ ಉಂಟು ಮಾಡಿದ ತೋಟಿ ಹೊಸ ಭರವಸೆ ಹುಟ್ಟಿಸಿದ್ದಾರೆ. ಸದ್ದಿಲ್ಲದೆ ಮದ್ದರೆವೆ, ಆಲಿಸು ದೇವರ ದೇವ ಮುಂತಾದ ಪದ್ಯಗಳಿಗೆ ಉತ್ತಮ ಅಭಿನಯ ಮತ್ತು ಕುಣಿತಗಳಿಂದ ಮನಸೂರೆಗೈದರು. ಭಸ್ಮಾಸುರನ ಆರಂಭದ ದ್ರುಶ್ಯಗಳಿಗೆ ಚಿಟ್ಟಾಣಿಯವರು ಕಿರೀಟ ಬಳಸುತ್ತಾರೆ. ಬಹುಶ ತೋಟಿಯವರು ಇಲ್ಲಿ ಶಂಭು ಹೆಗಡೆಯವರ ಭಸ್ಮಾಸುರ ವೇಷದಿಂದ ಪ್ರಭಾವಿತರಾದಂತೆ ತೋರುತ್ತದೆ. ತೋಟಿಯವರು ಯಾವ ಸನ್ನಿವೇಶಗಳಿಗೂ ಕಿರೀಟ ಧರಿಸಲಿಲ್ಲ. ಯಕ್ಶಗಾನದಲ್ಲಿ ಭಸ್ಮಾಸುರನಿಗೆ ಯಾವ ರೀತಿಯ ಕಿರೀಟ ಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲವಿದ್ದ ಹಾಗಿದೆ. ಭಸ್ಮಾಸುರನ ಪಾತ್ರಕ್ಕೆ ಬಹುಶ ಚಿಟ್ಟಾಣಿಯವರೆ ರೆಫ಼ರೆನ್ಸ್.

ಸಮಯದ ಅಭಾವದಿಂದ ಮೋಹಿನಿ ಭಸ್ಮಾಸುರರ ಶ್ರುಂಗಾರ ಸನ್ನಿವೇಶಗಳು ನಿರೀಕ್ಶೆಯ ಮಟ್ಟವನ್ನು ತಲುಪಲಿಲ್ಲ. ತೋಟಿಯವರಿಗೆ ಈ ಸನ್ನಿವೇಶಗಳಿಗೆ ಭಾಗವತರಾಗಿ ಒದಗಿ ಬಂದವರು, ಭಸ್ಮಾಸುರ ಮೋಹಿನಿ ಪ್ರಸಂಗದ ಭಾಗವತಿಕೆಗೆ ನ ಭೂತೊ ನ ಭವಿಶ್ಯತಿ ಎಂದು ಹೆಸರಾದ ಧಾರೇಶ್ವರರು. ಶ್ರುಂಗಾರ ಸನ್ನಿವೇಶಗಳೆಲ್ಲಾ ಅತ್ಯಂತ ವೇಗವಾಗಿ ಮುಗಿದು ಪ್ರಸಂಗದ ಕೊನೆಯ ಹಂತ ಭಾರ್‍ಈ ನಿರಾಸೆ ಮೂಡಿಸಿತು.

ಭಸ್ಮಾಸುರನ ಭೋಗಲಾಲಸೆಯ ಉತ್ಕಂಠತೆಯನ್ನು ಸಾರುವ (ಇದು ಭಸ್ಮಾಸುರ ಪ್ರಸಂಗದ ಅತ್ಯಂತ ಪ್ರಸಿದ್ಧ ಪದ್ಯಗಳಲ್ಲೊಂದು) ಜಾಣೆ ಶಿರೋಮನಿ ಬಾರೆ ಪದ್ಯಕ್ಕೆ ಕತ್ತರಿ ಪ್ರಯೋಗ ಮಾಡಿದ ಧಾರೇಶ್ವರರು ಪ್ರೇಕ್ಶಕರಿಗಿ ಭಾರ್‍ಈ ನಿರಾಸೆ ಉಂಟು ಮಾಡಿದರು.ಅದೇ ರೀತಿ ಮೋಹಿನಿ ತನ್ನ ಹರಕೆಯೊಂದಿದೆ ಎಂದು ಭಸ್ಮಾಸುರನಿಗೆ ನಿವೇದನೆ ಮಾಡಿಕೊಳ್ಲುವ ಪದ್ಯವೂ ಮಾಯ. ಒಟ್ಟೂ ಪ್ರಸಂಗದ ದ್ರುಷ್ಟಿಯಿಂದ ಪ್ರೇಕ್ಶಕರಿಗೆ ಕಲಾವಿದರು ಒಂದು ಪ್ರದರ್ಶನದ ಹರಕೆ ತೀರಿಸಿದ ಅನುಭವ. ಯಕ್ಶಗಾನದಿಂದ ಪ್ರೇಕ್ಶಕ ದೂರವಾಗುವುದಕ್ಕೆ ಇದೂ ಒಂದು ಕಾರಣ ಎಂದು ವಿಶಾದದಿಂದ ಹೇಳಬೇಕಾಗಿದೆ..

೫ ಘಂಟೆಗೆ ಒದಗುವ ಪ್ರಸಂಗವನ್ನು ಮೂರು ಘಂಟೆಗಳಿಗೆ ಕುಗ್ಗಿಸುವಾಗ , ಕಲಾವಿದರು ಒಟ್ಟಿಗೆ ಕುಳಿತು ಯೋಚಿಸುವ ಅವಶ್ಯಕತೆ ಇದೆ. ಹಾಸ್ಯ ಪಾತ್ರಗಳಿಗೆ ಅಗತ್ಯಕ್ಕಿಂತ ಹೆಚ್ಚು ಸಮಯದ ನಿಗದಿ, ವಿಶ್ಣುವಿನ ಪಾತ್ರಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಅವಕಾಶ, ಅನಗತ್ಯ ದೇವೇಂದ್ರನ ಒಡ್ಡೋಲಗ (ಅದು ಸಾಂಪ್ರದಾಯಿಕ ಅಲ್ಲ)ಇತ್ಯಾದಿಗಳಿಂದಾಗಿ ಪ್ರಸಂಗ ಸೊರಗಿತು.

ಮೋಹಿನಿಯ ಪಾತ್ರದಲ್ಲಿ ನೀಲ್ಕೋಡ್ ಮಂಟಪ ಪ್ರಭಾಕರ ಉಪಾಧ್ಯರ ಮೋಹಿನಿ ಪಾತ್ರವನ್ನು ಅನುಕರಿಸಿದರೂ ತಮ್ಮ ನ್ರುತ್ಯದಿಂದ ಗಮನ ಸೆಳೆದರು. ಶಿವನಾಗಿ ಉಪ್ಪುಂದ ನಾಗೆಂದ್ರ ಉತ್ತಮ ಪ್ರದರ್ಶನ ನೇಡಿದರು. ಮಾತುಗಾರಿಕೆಯಲ್ಲಿ ಪಳಗಿದರೆ, ಇವರಿಂದ ಇನ್ನಷ್ಟು ನಿರೀಕ್ಶಿಸಬಹುದು.

ಧಾರೇಶ್ವರರು ಕೆಲವು ಹಳೆಯ ಮಟ್ಟಿನ ಹಾಡುಗಳನ್ನು (ಬಂದಳಾಗ ಮೋಹಿನಿ ಆನಂದದಿಂದ, ಯಾರಯ್ಯ ವಿಚಾರಿಸುವೆ, ಕಂಡನು ಭಸ್ಮಾಸುರ) ಆಕರ್ಶವಾಗಿ ಹಾಡಿದರು. ಆದರೆ ಅವರು ಹಾಡಿದ ಪದ್ಯಗಳಿಗಿಂತಲೂ ಕತ್ತರಿ ಪ್ರಯೋಗಕ್ಕೆ ಒಳಗಾದ ಪದ್ಯಗಳೇ ಜಾಸ್ತಿ ಇದ್ದುದರಿಂದಲೋ ಏನೋ, ಪ್ರಸಂಗ ಕಳೆ ಕಟ್ಟಲಿಲ್ಲ. ತೋಟಿಯವರಿಗೆ ಭಸ್ಮಾಸುರನ ಪಾತ್ರ ಒಲಿಯುವ ಎಲ್ಲ ಲಕ್ಶಣಗಳೂ ಇವೆ ಎಂಬುದು ಸಮಧಾನದ, ಸಂತೋಷದ ಸಂಗತಿ.

Sunday, June 28, 2009

ಪಾಪಣ್ಣನಾಗಿ ಗೆದ್ದ ಚಿಟ್ಟಾಣಿ - ಯಕ್ಶ ಮುಂಗಾರಿಗೊಂದು ಹಿನ್ನುಡಿ

ಚಿಟ್ಟಾಣಿಯವರ ಅಪರೂಪದ ಪಾಪಣ್ಣ ಪಾತ್ರದ ಆಕರ್ಶಣೆಯೊಂದಿಗೆ ಅನಾವರಣಗೊಂದ ಸಾಲಿಗ್ರಾಮ ಮೇಳದ ಪಾಪಣ್ಣ ವಿಜಯ - ಚಂದ್ರಹಾಸ ಪ್ರಸಂಗ ಭಾರೀ ಪ್ರೇಕ್ಶಕ ವರ್ಗವನ್ನು ಸೆಳೆಯಿತು. ಚಿಟ್ಟಾಣಿಯವರ ಪಾಪಣ್ಣ, ಶಶಿಕಾಂತ ಶೆಟ್ಟಿಯವರ ಗುಣಸುಂದರಿ, ಕಣ್ಣಿಯವರ ನಿಜ ಪಾಪಣ್ಣ ಪ್ರೇಕ್ಶಕರನ್ನು ರಂಜಿಸುವಲ್ಲಿ ಸಫ಼ಲವಾಯಿತಾದರೂ, ಉಳಿದ ಪಾತ್ರಗಳು ಹವ್ಯಾಸಿ ಕಲಾವಿದರ ಮಟ್ಟದಲ್ಲೆ ಉಳಿದು ಪ್ರದರ್ಶನ ಒಟ್ಟಂದಕ್ಕೆ ಕುಂದುಂಟಾಯಿತು.

ಚಿಟ್ಟಾಣಿ ಯಾವ ಪಾತ್ರಕ್ಕಾದರೂ ನ್ಯಾಯ ಒದಗಿಸಬಲ್ಲ ಅಪರೂಪದ ಕಲಾವಿದ. ಪಾಪಣ್ಣ ವಿಜಯದ ಪಾಪಣ್ಣನಾಗಿ ದೊಡ್ಡ ಹೆಸರು ಮಾಡಿದವರು ತೆಂಕಿನ ಹಿರಿಯ ಹಾಸ್ಯಗಾರರಾದ ಪೆರ್ವೋಡಿ ನಾರಾಯಣ ಭಟ್ಟರು. ಗೂನು ಬೆನ್ನಿನ, ವಿಕಾರ ಮುಖದ ಭಿಕ್ಶುಕನ ಪಾತ್ರ (ಬಹುತೇಕ ಹಾಸ್ಯಗಾರರೇ ನಿರ್ವಹಿಸುವ) ಮಾಡಿ ಸೈ ಎನಿಸಿಕೊಳ್ಳುವುದು ಬಹುಶ ಚಿಟ್ಟಣಿಯವರಂಥ ಅತಿರಥ ಕಲಾತಪಸ್ವಿಗಳಿಗೆ ಮಾತ್ರ ಸಾಧ್ಯವೇನೊ? ಇಲ್ಲಿ ಇನ್ನೊಂದು ಮಾತನ್ನು ಹೇಳಲೇಬೇಕಿದೆ. ಪೆರ್ವೋಡಿ ನಾರಾಯಣ ಭಟ್ಟರ ಪಾಪಣ್ಣನ ಪಾತ್ರವನ್ನು ಸಾಕಷ್ಟು ಬಾರಿ ನೋಡಿದ ಪ್ರೇಕ್ಷಕರೋರ್ವರು ಚಿಟ್ಟಾಣಿಯವರ ಪಾಪಣ್ಣನ ವೇಶವನ್ನು ಕೊಂಡಾಡಿರುವುದು ಅವರ ಪ್ರತಿಭೆಗೆ ಸಂದ ಗೌರವ.

ಈ ಪ್ರದರ್ಶನದಲ್ಲಿ ಗಮನಿಸಬೇಕದ ಪ್ರಮುಖ ಅಂಶ ಭಾಗವತಿಕೆ. ಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ಹೆರಂಜಾಲು ಆರಂಭದಲ್ಲಿ ಕೇವಲ ಒಂದು ಘಂಟೆ ಸಮಯ ಭಾಗವತಿಕೆಯ ಶಾಸ್ತ್ರ ಮುಗಿಸಿ ನಿರ್ಗಮಿಸಿದರು. ಆರಂಭದ ಗಣಪತಿ ಸ್ತುತಿ ನಡೆದಾಗ ರಂಗ ಪರದೆ ಇಳಿ ಬಿಟ್ಟಿದ್ದರಿಂದ ಯಾರ್‍ಒ ಭಾಗವತಿಕೆ ಕಲಿಯುತ್ತಿರುವರು ಹಾಡುತಿದ್ದಾರೆ ಎಂದೇ ಎಣಿಸಿದ್ದೆ. ಇಂದಿರೆಗೆ ತಲೆಬಾಗಿ ಪದ್ಯವಂತೂ ಕಾಟಾಚಾರಕ್ಕೆ ಹೇಳಿದಂತಿತ್ತು. ರಂಗ ಪರದೆ ಸರಿದಾಗ ಮೇಳದ ಪ್ರಧಾನ ಭಾಗವತರನ್ನು ಕಂದು ಶಾಕ್ ಆದದ್ದು ಸುಳ್ಳಲ್ಲ. ಮುಂದೆ ರಂಗ ಸಾರಥ್ಯವನ್ನು ವಹಿಸಿಕೊಂಡ ರವಿ ಸೂರಾಲ್ ಆರಂಭದಲ್ಲಿ ಎಡವಿದರೂ ಕೆಲವು ಉತ್ತಮ ಪದ್ಯಗಳನ್ನು ಹಾಡಿ ಭರವಸೆ ಮೂಡಿಸಿದರು. ಆರಂಭದಲ್ಲಿ ಈ ಭಾಗವತರ ಪದ್ಯ ಪ್ರೇಕ್ಶಕ ವರ್ಗದ ತಾಳ್ಮೆ ಪರೀಕ್ಶಿಸಿದರೂ ನಂತರದಲ್ಲಿ "ಆಗುವುದೆಲ್ಲಾ ಒಳ್ಳೆಯದಕ್ಕೆ" ಎಂಬ ಮಾತನ್ನು ಪುಸ್ಟೀಕರಿಸಿತು.

ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಹೆರಂಜಾಲು ಅವರನ್ನು 'ಪರಂಪರೆಯ ಭಾಗವತ' ಎಂದು ಬ್ರಾಂಡ್ ಮಡುವ ಒಂದು ವಿಮರ್ಶಕ ವರ್ಗವಿದೆ. ಪರಂಪರೆಯ ಭಾಗವತ ಎಂದರೆ 'ಕೆಟ್ಟದಾಗಿ, ರಾಗ, ಲಯ, ಸ್ವರ ಶುದ್ಧಿಯಿಲ್ಲದೆ ಹಾಡುವ ಭಾಗವತ ಎಂಬುದು ಈಗ ಸರ್ವವಿದಿತ. ಇದಕ್ಕಾಗಿ ವಿಮರ್ಶಕ (?) ವರ್ಗವನ್ನು ತೆಗಳಬೇಕೆ, ಯಾರೋ ಹೇಳಿದ್ದನ್ನು ಸತ್ಯವೆಂದೇ ನಂಬುವ ಕಲಾಭಿಮಾನಿಗಳ ಮೌಡ್ಯದ ಕುರಿತು ಮರುಗಬೇಕೆ ಎಂಬುದು ಪ್ರಶ್ನೆಗಳೆ!

ರಾಘವೇಂದ್ರ ಮಯ್ಯರ ಭಾಗವತಿಕೆಯಲ್ಲಿ ರಾಗ ಮತ್ತು ಲಯಗಾರಿಕೆಯನ್ನು ನಿರೇಕ್ಷೆ ಮಾಡುವುದು ಸರಿಯಲ್ಲ.ಸ್ವರವನ್ನು ಪರಿಣಾಮಕಾರಿಯಾಗಿ ರಂಗದಲ್ಲಿ ಹೇಗೆ ಉಪಯೋಗಿಸಬೇಕು ಎಂಬ ಕುರಿತು ಮಯ್ಯರು ಆತ್ಮಾವಲೋಕನ ಮಾಡುವ ಅವಶ್ಯಕತೆ ಖಂಡಿತಕ್ಕೂ ಇದೆ. ಒಟ್ಟಿನಲ್ಲಿ ಯಕ್ಷ ಭಾಗವತಿಕೆಯ ಯುಗ ಪ್ರವರ್ತಕ ಮಿಂಚಿ ಮರೆಯಾದ ಸಾಲಿಗ್ರಾಮ ಮೇಳಕ್ಕೆ ಈಗ ಬೇಕಾಗಿರುವುದು ಒಬ್ಬ ಸಮರ್ಥ ಭಾಗವತ!

ರಮೇಶ ಬೇಗಾರರು ಒಂದು ಉತ್ತಮ ಕಾರ್ಯಕ್ರಮವನ್ನು ಸಂಯೋಜನೆ ಮಾಡಿರುವುದಕ್ಕೆ ಯಕ್ಶ ರಸಿಕರ ಪರವಾಗಿ ಅವರಿಗೆ ಕೃತಜ್ನತೆಗಳು. ಸಭಾ ಕಾರ್ಯಕ್ರಮವನ್ನು ಅಲ್ಪಾವದಿಯಲ್ಲಿ ಮುಗಿಸಿ ಅವರು ಕಾರ್ಯಕ್ರಮ ನಿರ್ವಹಣೆಗೊಂದು ದಿಶಾ ನಿರ್ದೇಶನವನ್ನು ಮಾಡಿದ್ದಾರೆ. ಬೆಂಗಳೂರಿನ ಕಾರ್ಯಕ್ರಮಗಳಲ್ಲಿ ಇದು ಹೀಗೇ ಮುಂದುವರಿದರೆ ಯಕ್ಷಗಾನ ಕಾರ್ಯಕ್ರಮಗಳಿಗೆ ಇನ್ನಷ್ಟು ಕಲಾಭಿಮಾನಿಗಳು ಕಾರ್ಯಕ್ರಮ ಸವಿಯಲೋಸುಗ ಮತ್ತೆ ಬಂದಾರು. ಹಾಗಾಗಲಿ ಎಂದು ಹಾರೈಸೋಣ.

Monday, April 20, 2009

ಐವತ್ತೈದನೆಯ ವೈಭವಾಚರಣೆಗೆ ಎಷ್ಟು ಮೃದಂಗಗಳು ಬೇಕು ?



ಶಂಕರ ಭಾಗವತ ಯಲ್ಲಾಪುರ ಅವರ ಸನ್ಮಾನ ಕಾರ್ಯಕ್ರಮ ನಾದವೈಭವ - ೫೫ ಎಂಬ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಶಂಕರ ಭಾಗವತರು ಬಡಗು ತಿಟ್ಟಿನ ಅತ್ಯುತ್ತಮ ಮದ್ದಳೆಗಾರರ ಸಾಲಿಗೆ ಸೇರಿದವರು ಎಂಬುವುದರಲ್ಲಿ ಎರಡು ಮಾತಿಲ್ಲ. ಕಾಳಿಂಗ ನಾವಡ, ಧಾರೇಶ್ವರ ಮುಂತಾದ ಖ್ಯಾತ ಭಾಗವತರ ಭಾಗವತಿಕೆಯನ್ನು ಸಮರ್ಥವಾಗಿ ನಿಭಾಯಿಸಿದವರು ಶಂಕರ ಭಾಗವತರು. ಇಂಥಹ ಖ್ಯಾತ ಮದ್ದಲೆಗಾರರಿಗೆ ತನ್ನ ಐವತ್ತೈದನೆಯ ವರ್ಶದಲ್ಲಿ ಧಾರೇಶ್ವರ ಮತ್ತು ದುರ್ಗಪ್ಪ ಗುಡಿಗಾರರ ಪ್ರಯೋಗವನ್ನು ಅನುಕರಣೆ ಮಾಡಿ ಚಪ್ಪಾಳೆ ಗಿಟ್ಟಿಸುವ ಅವಶ್ಯಕತೆ ಇತ್ತೆ ಎಂಬುದು ಪ್ರಶ್ನೆ.

ಐದು ಮದ್ದಲೆ ವಾದನದ ಪ್ರಯೋಗ ಭಾಗವತ ಧಾರೇಶ್ವರರ ಕಲ್ಪನೆಯ ಕೂಸು. ದುರ್ಗಪ್ಪ ಗುಡಿಗಾರರ ಮೂಲಕ ಜನಪ್ರಿಯವಾದ ಈ ಪ್ರಯೋಗವನ್ನು ಇತ್ತೀಚಿನ ದಿನಗಳಲ್ಲಿ ಕಿರಿ ಮದ್ದಲೆಗಾರರು ಅನುಕುರಿಸುತ್ತಿರುವುದು ಕಂದು ಬರುತ್ತಿದೆ. ದುರ್ಗಪ್ಪ ಗುಡಿಗಾರರ ಮರಣಾ ನಂತರ ಧಾರೇಶ್ವರರು ಈ ಪ್ರಯೋಗವನ್ನು ಹೆಚ್ಚು ಕಡಿಮೆ ನಿಲ್ಲಿಸಿರುವಂತೆ ತೋರುತ್ತಿದೆ. ಹಿಂಧೋಳ (ಹಿಂದೂಸ್ಥಾನಿ ಮಾಲಕಂಸ್) ರಾಗದ ಐದು ಸ್ವರಗಳಿಗೆ ಸರಿಯಾಗಿ ಐದು ಮದ್ದಳೆಗಳನ್ನು ನುಡಿಸುವುದು ಈ ಪ್ರಯೋಗದ ಮೂಲ ಕಲ್ಪನೆ. ಸ್ವರಗಳ ಕಲ್ಪನೆಯಿಲ್ಲದ ಭಾಗವತರು ಮದ್ದಲೆಗಾರರು ಈಗ ಒಟ್ಟಾರೆ ಐದು ಮದ್ದಲೆ, ಆರು ಮದ್ದಲೆಗಳನ್ನು ಯವೊಂದು ಸೊಗಸೂ ಇಲ್ಲದೆ ಟಮ್ ಟಮ್ ಟಮ್ ಎಂಬ ನಾದ ಹೊರಡಿಸಿ ಚಪ್ಪಾಳೆ ಗಿಟ್ಟಿಸುವ ಸರ್ಕಸ್ಸಿಗೆ ಉಪಯೋಗಿಸುತ್ತಿರುವುದು ಚೋದ್ಯವೇ ಸರಿ. ಈ ಜಾಡ್ಯ ಈಗ ಖ್ಯಾತ ಮದ್ದಲೆಗಾರ ಶಂಕರ ಭಾಗವತರಿಗೂ ತಗುಲಿದ್ದು ಒಂದು ದುರಂತ.

ಶಂಕರ ಭಾಗವತರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಎಂಟು ಮದ್ದಲೆ ಬಳಸಿದರು. ಸಾಲದ್ದಕ್ಕೆ ಎರಡು ತಬಲ ಪ್ರಯೋಗವೂ ನಡೆಯಿತು. ಅಂತೂ ಐವತ್ತೈದನೆಯ ವರುಶದ ನಾದವೈಭವ ಶಂಕರ ಭಾಗವತರ ಮೃದಂಗಜೀವನದಲ್ಲಿ ಅಳಿಸಲಾಗದ ಕಲೆಯೊಂದನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು ಎನ್ನಲಡ್ಡಿಯಿಲ್ಲ.

Thursday, April 16, 2009

ಬೆಂಗಳೂರು - ಯಕ್ಷಗಾನ ವೀಕ್ಷಣೆಯೆಂಬ ಹಿಂಸೆ

ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡುವುದು ಸಭ್ಯ, ಸುಸಂಕೃತ ಪ್ರೇಕ್ಷಕರಿಗೆ ಹಿಂಸೆಯಾಗಿ ಪರಿಣಮಿಸಿದೆ. ಮೊದಲನೆಯದಾಗಿ ಪ್ರೇಕ್ಷಕರ, ಅಭಿಮಾನಿಗಳ ಅತಿರೇಕದ ವರ್ತನೆ. ಇವರ ಸಿಳ್ಳು, ಚಪ್ಪಾಳೆ, ಕೂಗಾಟ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ಇವರು ಯಕ್ಷಗಾನ ಪ್ರದರ್ಶನ ನೋಡುವುದಕ್ಕೆ ಬಂದಿದ್ದಾರೆಯೆ ಅಥವ ಕೂಗಾಡುವುದಕ್ಕೆ ಬಂದಿದ್ದಾರೆಯೊ ಎನಿಸುತ್ತದೆ. ಬಹುತೇಕ ಜನರು ಪಾನಮತ್ತರಾಗಿ ಬರುವುದೂ ಕೂಡ ಸಾಮಾನ್ಯ.

ಎರಡನೆಯದಾಗಿ ಅತೀ ಎನಿಸುವ ಸಭಾ ಕಾರ್ಯಕ್ರಮ. ಯಕ್ಷಗಾನ ಯೋಗಕ್ಷೇಮ ಹೊಣೆ ಹೊತ್ತಿರುವ ಹಿರಿಯರೊಬ್ಬರು ಈಗ ತೀರ ಹಾಸ್ಯಾಸ್ಪದರಾಗಿರುವುದು ದೊಡ್ಡ ದುರಂತ. ಘಂಟೆಗತ್ತಲೆ ನಡೆಯುವ ಈ ಸಭಾ ಕಾರ್ಯಕ್ರಮಗಳಿಂದಾಗಿ ಹೆಂಗಸರು ಮಕ್ಕಳು ಯಕ್ಷಗಾನ ನೋಡದೆ ಹಿಂದಿರುಗುವುದು, ಸಭಾ ಕಾರ್ಯಕ್ರಮಗಳಿದ್ದಲ್ಲಿ ಅಂಥಹ ಪ್ರದರ್ಶನಗಳಿಗೆ ಬಾರದಿರುವುದು ಇತ್ತೀಚಿನ ದುರಂತಮಯ ಬೆಳವಣಿಗೆ. ಅತಿಯಾದರೆ ಅಮೃತವೂ ವಿಷವೆಂಬ ನಾಣ್ಣುಡಿಯನ್ನು ಬಲ್ಲ ಎಲ್ಲ ಕಲಾಪ್ರೇಮಿಗಳು, ಸಂಘಟಕರು ತಕ್ಷಣ ಕಾರ್ಯಪ್ರವೃತ್ತರಾಗಿ, ಯಕ್ಷಗಾನವನ್ನು ಹಿಂಸೆಯಿಲ್ಲದೆ, ಸಭ್ಯರೀತಿಯಿಂದ ಸವಿಯುವ ಅವಕಾಶವನ್ನು ಮಾಡಿಕೊಡಲಿ ಎಂಬುದು ನನ್ನ ಕಳಕಳಿಯ ಪ್ರಾರ್ಥನೆ.