Sunday, August 2, 2009

ಯಕ್ಷಪ್ರಿಯರ ಮನತಣಿಸಿದ 'ಜಾಂಬವತಿ ಕಲ್ಯಾಣ'




ಜಾಂಬವತಿ ಕಲ್ಯಾಣ ಬಡಗು ತಿಟ್ಟಿನಲ್ಲಿ ಅಪರೂಪವಾಗಿ ಪ್ರದರ್ಶಿತವಾಗುವ ಪ್ರಸಂಗ. ಈ ಪ್ರಸಂಗದಲ್ಲಿ ಹೆಸರು ಮಾಡಿದ ಪ್ರಸಿದ್ಧ ಕಲಾವಿದರ ಹೆಸರು ಕಾಣಸಿಗದು. ಶಂಭು ಹೆಗಡೆ, ಚಿಟ್ಟಾಣಿಯವರು ಈ ಪ್ರಸಂಗದಲ್ಲಿ ಪಾತ್ರ ವಹಿಸಿದ ಕುರಿತು ಹೆಚ್ಚೇನೂ ಮಾಹಿತಿಯಿಲ್ಲ. ಬಹುಶ ಚಿಟ್ಟಾಣಿಯವರು ಜಾಂಬವ ಮತ್ತು ಕೃಷ್ಣನ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಕ್ಕೂ ಸಾಕು. ರಸಮಯ ಸನ್ನಿವೇಶಗಳಿಂದೊಡಗೂಡಿದ ಈ ಪ್ರಸಂಗ ಎಲೆಮರೆಯ ಕಾಯಿಯಂತೆಯೇ ಇರುವುದಕ್ಕೆ ಕಾರಣ ತಿಳಿಯದು.

ಕೆಲವು ವರ್ಷಗಳ ಹಿಂದೆ ಕರ್ಕಿ ಮೇಳದವರು ಈ ಪ್ರಸಂಗವನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿದ್ದರು. ಪೆರ್ಡೊರು ಮತ್ತು ಸಾಲಿಗ್ರಾಮ ಮೇಳಗಳ ತಿರುಗಾಟದಲ್ಲಿ ಈ ಪ್ರಸಂಗ ಅಪರೂಪಕ್ಕೆ ಕಾಣಿಸಿಕೊಳ್ಳುವುದುಂಟು. ಕೊಂಡದಕುಳಿ ಬಳಗದವರಿಂದ ಬೆಂಗಳೂರಿನಲ್ಲಿ ಪ್ರದರ್ಶಿತವಾದ, ಜಾಂಬವತಿ ಕಲ್ಯಾಣ ಯಕ್ಷರಸಿಕರಿಗೆ ರಸದೌತಣವಾಯ್ತು.

ಬಲರಾಮನ ಪಾತ್ರದಲ್ಲಿ ವಿಶ್ಣು ಭಟ್ಟರು ತಮ್ಮ ಮಾತುಗಾರಿಕೆ, ಭಾವನೆಗಳ ಅಭಿವ್ಯಕ್ತಿಯಲ್ಲಿ ಮಿಂಚಿದರು. ಬಲರಾಮ ಮತ್ತು ಕೃಷ್ಣರ ಸನ್ನಿವೇಶಗಳು ಅತ್ಯಂತ ಸೊಗಸಾಗಿ ಮೂಡಿಬಂತು. ತೋಟಿಯವರ ಕೃಷ್ಣನ ಪಾತ್ರ ಈ ಸನ್ನಿವೇಶದಲ್ಲೂ ಮನೋಜ್ನವಾಗಿತ್ತು. ಕೃಷ್ಣ ಯಾದವರೊಡನೆ ಪ್ರಸೇನನನ್ನು ಹುಡುಕುತ್ತ ಹೊರಟ ದೃಶ್ಯಗಳು ಸೊಗಸಾಗಿದ್ದವು.

ನಾರದನ ಪಾತ್ರಧಾರಿಯು ಬಲರಾಮನಲ್ಲಿ ' ಈ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುವ ಕೆಲಸ ನನಗೆ ಬೇಡ' ಎಮ್ಬ ಮಾತುಗಳನ್ನಾಡಿ ಅಭಾಸಕ್ಕೆ ಗುರಿಯಾದರು.

ಜಾಂಬವತಿ ಕಲ್ಯಾಣದಲ್ಲಿ ಬಹು ನಿರೀಕ್ಷೆಯ ಪದ್ಯವೆಂದರೆ ಕೃಷ್ಣ ಜಾಂಬವತಿಯನ್ನು ಕಾಣುವ ಸನ್ನಿವೇಶದ 'ಶರದರುತು ಪೌರ್ಣಮಿಯ ಉದಯಚಂದಿರ ಕಾಂತಿ' ಹಾಡು. ಈ ಪದ್ಯವನ್ನು ಭಾಗವತ ಪ್ರಸನ್ನ ಭಟ್ ಬಾಳ್ಕಲ್ ಬಹಳ ಸೊಗಸಾಗಿ ಹಾಡಿದರು. ಈ ಹಾಡಿಗೆ ಕೃಷ್ಣನಾಗಿ ತೋಟಿಯವರ ಅಭಿನಯವೂ ಮನಮೋಹಕವಾಗಿತ್ತು. ಜಾಂಬವತಿಯ ಪಾತ್ರ ಮಾತ್ರ ಸೊರಗಿತು.

ಜಾಂಬವನಾಗಿ ಕೊಂಡದಕುಳಿಯವರು ಮಿಂಚಿದರು. ಜಾಂಬವನ ವೀರ ಮತ್ತು ಭಕ್ತಿ ರಸಗಳ ಅಭಿವ್ಯಕ್ತಿ ಮನಸೆಳೆಯಿತು. ತೊಟಿಮನೆಯವರ ಕೃಷ್ಣ ಕೂಡ ಜಾಂಬವನೊಂದಿಗೆ ಅಷ್ಟೇ ಸಮರ್ಥವಾಗಿ ಮೆರೆಯಿತು. ಕೊಂಡದಕುಳಿ, ತೋಟಿಯವರ ಜೋಡಿ ವೇಷಗಳು ಪ್ರೇಕ್ಷಕರಿಗೆ ರಸಗವಳ. ಜಾಂಬವನ ವೇಶ ಮತ್ತು ಮುಖವರ್ಣಿಕೆ ಬಹಳ ಸೊಗಸಾಗಿತ್ತು.

ಪ್ರಸನ್ನ ಭಟ್ಟ್ ಬಾಳ್ಕಲ್ ಅವರ ಭಾಗವತಿಕೆಯೂ ಪ್ರಸಂಗ ಕಳೆಗಟ್ಟಲು ಕಾರಣವಾಯ್ತು. ಕೆಲವು ಪದ್ಯಗಳು ಅತ್ಯಂತ ಭಾವಪೂರ್‍ಣವಾಗಿ ಮೂಡಿಬಂದವು. ಪೌರಾಣಿಕ ಪ್ರಸಂಗಗಳನ್ನು ಮತ್ತೆ ಜನಮಾನಸಕ್ಕೆ ತಲಪಿಸುತ್ತಿರವ ಸ್ತುತ್ಯರ್ಹ ಕೆಲಸ ಮಾಡುತ್ತಿರುವ ಕೊಂಡದಕುಳಿ ಬಳಗಕ್ಕೆ ನಮನಗಳು.

No comments: