Tuesday, May 27, 2008

ಮತ್ತೆ ನೆನಪಾದರು ಕಾಳಿಂಗ ನಾವಡ







ಮೇ ತಿಂಗಳ ಇಪ್ಪತ್ತೆಂಟನೇ ತಾರೀಖು, ೧೯೯೦. ಯಕ್ಷಗಾನ ಭಾಗವತಿಕೆಯ ಯುಗ ಪ್ರವರ್ತಕ ಕಾಳಿಂಗ ನಾವಡರು ಕೇವಲ ಮೂವತ್ತಮೂರನೆಯ ವಯಸ್ಸಿನಲ್ಲಿ ರಸ್ತೆ ಅಪಘಾತಕ್ಕೊಳಗಾದ ದುರ್ದಿನ. ಇಂದೂ ಕೂಡಾ ಆ ಘಟನೆಯನ್ನು ನೆನೆದರೆ ಕರುಳು ಚಿವುಕ್ಕೆನ್ನುವ ಅನುಭವ.

ಬಹುಶ: ಬಲಿಪ ಭಾಗವತರು ಮತ್ತು ನೆಬ್ಬೂರು ಭಾಗವತರನ್ನು ಬಿಟ್ಟರೆ ನಾವಡರ ಪ್ರಭಾವಲಯಕ್ಕೆ ಸಿಕ್ಕದ ಭಾಗವತರೇ ಇಲ್ಲವೆಂದರೆ ತಪ್ಪಾಗಲಿಕ್ಕಿಲ್ಲ. ಆ ಭಾಗವತರು ನಾವಡರಂತೆ ಹಾಡುತ್ತಾರೆ ಎಂಬ ಮಾತನ್ನು ಕೇಳಲು ತವಕಿಸುತ್ತಿದ್ದ ಭಾಗವತರಿಗೆ ಲೆಖ್ಖವಿಲ್ಲ. ನಾವಡರ ಪ್ರಭಾವಲಯ ಇಂದೂ ಕೂಡಾ ಮುಂದುವರೆದಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ.

ನಾನು ಕಾಳಿಂಗ ನಾವಡರನ್ನು ಮೊದಲಿಗೆ ನೋಡಿದ್ದು ೧೯೭೯ ರಲ್ಲಿ. ಅಂದು ವಿಟ್ಲ ಎಂಬಲ್ಲಿ ಕಾಂಚನಶ್ರೀ ಎಂಬ ಆಟ. ಕಾಳಿಂಗ ನಾವಡರ ಹಾಡು ಕೇಳಲಿಕ್ಕೆಂದೇ ನಮ್ಮ ಬಂಧುಗಳ ಜೊತೆ ಹೋಗಿದ್ದೆ. ಕಾಳಿಂಗ ನಾವಡ ರಂಗಕ್ಕೆ ಬರುವವರೆಗೆ ಅವರ ಕುರಿತೇ ಮಾತು. ಸರಿಯಾಗಿ ಒಂದು ಘಂಟೆ ರಾತ್ರಿ ಕಾಳಿಂಗ ನಾವಡರು ರಂಗ ಪ್ರವೇಶ ಮಾಡುತ್ತಿಂದ್ದಂತೆಯೇ ಸಭೆಯಲ್ಲಿ ಚಪ್ಪಾಳೆಯ ಸುರಿಮಳೆ. ಅದಕ್ಕೆ ಮೊದಲು ಕಂಡು ಕೇಳರಿಯದ ಅಮೋಘ ಭಾಗವತಿಕೆ. ಅವರು ಆ ದಿನ ಪ್ರೇತವನ್ನು ಕುಣಿಸಿದ "ಕಿಲ ಕಿಲ ನಗುವುದು ಕಿಲ ಕಿಲ ಕಿಲ ಕಿಲ ನಗುವುದು" ಹಾಡು ಇಂಡು ಕೂಡ ನನ್ನ ನೆನಪಿನಲ್ಲಿದೆ.

ಆ ಬಳಿಕ ಅಕ್ಷರಶ: ನಮ್ಮ ಇಡೀ ಕುಟುಂಬವೇ ಕಾಳಿಂಗ ನಾವಡರ ಅಭಿಮಾನಿಗಳಾದೆವು. ಆಗ ದಕ್ಶಿಣ ಕನ್ನಡದಲ್ಲಿ ಅದರಲ್ಲೂ, ಗಡಿ ಪ್ರದೇಶವಾದ ನಮ್ಮ ಊರಿನಲ್ಲಿ ಬಡಗು ತಿಟ್ಟಿನ ಆಟಗಳಾಗುವುದೇ ಅಪರೂಪವಾಗಿತ್ತು. ಆದರೂ ಅವಕಾಶವಾದಗಲೆಲ್ಲ ಸಾಲಿಗ್ರಾಮ ಮೇಳದ ಆಟಕ್ಕೆ ಹೋಗುತ್ತಿದ್ದೆವು. ಒಮ್ಮೆ ಕುದ್ದುಪದವು ಎಂಬಲ್ಲಿ ನಾಗಶ್ರೀ ಆಟ. ಆ ದಿನ ಆಟ ಆರಂಭವಾದ ಬಳಿಕ ಕಾಳಿಂಗ ನಾವಡರು ಆ ದಿನ ರಜೆ ಎಂಬ ಸುದ್ದಿ. ಆದರೂ ಅವರು ಬರುತ್ತಾರೆ ಎಂಬ ಆಸೆಯಲ್ಲಿ ರಾತ್ರಿ ೨ ಘಂಟೆಯವರೆಗೂ ಕಾದಿದ್ದೆವು. ಈ ಘಟನೆಯನ್ನು ನೆನೆದಾಗಲೆಲ್ಲ ಆಸೆ ನಿರಾಸೆ ಆಯ್ತಲ್ಲ ಎಂಬ ಕಾಳಿಂಗ ನಾವಡರ ಹಾಡೊಂದು ಈಗ ನೆನಪಿಗೆ ಬರುತ್ತಿದೆ.

೧೯೮೬ ರಲ್ಲಿ ಧಾರೇಶ್ವರರ ಅಲೆ ಅರಂಭವಾಗುತ್ತಿದ್ದಂತೆ ಮತ್ತೆ ನಮ್ಮ ಗೆಳೆಯರ ಬಳಗ ಮತ್ತು ಬಂಧುಗಳ ಬಳಗದಲ್ಲಿ ಎರಡು ಬಣಗಳಾದುವು. ಧಾರೇಶ್ವರರಿಗಾಗಿ ಹೊಡೆದಾಡುವ ಪಡೆ ಒಂದಾದರೆ ನಾವಡರ ಪರ ಇನ್ನೊಂದು ಪಡೆ. ಆದ ವಾದ ವಿವಾದ, ಚರ್ಚೆಗಳಿಗೆ ಲೆಕ್ಖವಿಲ್ಲ. ಅದರ ಕುರಿತು ಇನ್ನೊಮ್ಮೆ ವಿವರವಾಗಿ ಬರೆದೇನು.

ಒಮ್ಮೆ ಕನ್ಯಾನದಲ್ಲಿ ಶ್ರುಂಗ ಸಾರಂಗ ಎಂಬ ಆಟ. ಸುಮಾರಾಗಿದ್ದ ಆ ಪ್ರಸಂಗದಲ್ಲಿ ನಾವಡರ ಹಾಡುಗಾರಿಕೆ ಸಾಮನ್ಯವಾಗಿತ್ತು. ಬೆಳಗ್ಗೆ ಕಾಳಿಂಗ ನಾವಡರಲ್ಲಿ ಈ ಕುರಿತು ಹೇಳಿದಾಗ ಅವರು ಸ್ವಲ್ಪವೂ ಬೇಸರ ಮಾಡದೆ ಅದೇ ದಿನ ರಾತ್ರಿ ಪೆರ್ಲ ಎಂಬಲ್ಲಿಗೆ ಬರಲು ಹೇಳಿದರು. ಅಲ್ಲಿ ದೇವಿ ಬನಶಂಕರಿ ಎಂಬ ಆಟ. ಅಂದು ಕಾಳಿಂಗ ನಾವಡರ ಅಮೋಘ ಭಾಗವತಿಕೆ. ಅಭಿಮಾನಿಗಳನ್ನು ಅವರು ಗೌರವಿಸುತ್ತಿದ್ದ ರೀತಿಯೇ ಅದು. ಈ ಘಟನೆ ನದೆದದ್ದು ೧೯೯೦ರಲ್ಲಿ. ಅದೇ ವರ್ಷ ನಾವಡರು ವಿಧಿಯ ಕ್ರೂರ ಅಟ್ಟಹಾಸಕ್ಕೆ ಬಲಿಯಾದದ್ದು ದುರ್ದೈವ.

ಇನ್ನೊಮ್ಮೆ ಅಡ್ಯನಡ್ಕದಲ್ಲಿ ಆಟ. ಆ ದಿನ ಬೆಳಗ್ಗೆ ನಾವಡರೊಡನೆ ಮಾತನಾದುತ್ತ, ಭಾಗವತರು ಯಾಕೆ ತುಂಬಾ ಲೇಟಾಗಿ ರಂಗಕ್ಕೆ ಬರುತ್ತಾರೆ ಎಂದೊಬ್ಬರು ಪ್ರಷ್ನೆಯನ್ನೆತ್ತಿದರು. ಕಾಳಿಂಗ ನಾವಡರು ಏನೂ ಮಾತನಾಡಲಿಲ್ಲ. ಆ ದಿನ ರಾತ್ರಿ ೧೨ ಘಂಟೆಗೆ ರಂಗಕ್ಕೆ ಬಂದರು!!

ಇಂದು ಧಾರೇಶ್ವರರು ಭಾಗವತರಾಗಿ ನಮ್ಮೊಂದಿಗಿರಲು ಕಾಳಿಂಗ ನಾವಡರೇ ಕಾರಣ ಎಂಬುದು ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ. ಯಕ್ಷಗಾನದಲ್ಲಿ ಆಸಕ್ತಿ ಇಲ್ಲದ ಧಾರೇಶ್ವರರು ಅಕಸ್ಮಾತ್ ಆಗಿ ಗೋಕರ್ಣದಲ್ಲಿ ನಡೆದ ಆಟವೊಂದರಲ್ಲಿ ನಾವಡರ ಹಾಡುಗಾರಿಕೆಯನ್ನು ಕೇಳಿದರಂತೆ. ರಾತ್ರಿ ಹನ್ನೆರಡು ಘಂಟೆಯವರೆಗೆ ಹೊರಗೆ ಸುತ್ತುತ್ತಿದ್ದ ಧಾರೇಶ್ವರದ ಸುಬ್ರಮಣ್ಯ ಎಂಬ ಯುವಕನ ಕಿವಿಗೆ ಹಿಂದುಸ್ತಾನಿ ಚಾಂದ್ ರಾಗದಲ್ಲಿ "ಹಿತವಾಯ್ತೆ ಪ್ರಿಯನೆ ಅತಿ ಕ್ರೂರಿಯಾದೆಯ..’ ಎಂಬ ಹಾಡು ಕಿವಿಗೆ ಬಿತ್ತಂತೆ. ಯಾರಿದು ಎಂದು ಒಳಕ್ಕೆ ಹೋಗಿ ನೋಡಿದಾಗ ಯುವ ಭಾಗವತನೊಬ್ಬ ಸುಶ್ರಾವ್ಯವಾಗಿ ಹಾಡುವುದನ್ನು ಕಂಡರಂತೆ.. ಉಳಿದದ್ದು ಈಗ ಇತಿಹಾಸ!!

ಕಾಳಿಂಗ ನಾವಡರ ದಿವ್ಯಾತ್ಮಕ್ಕೆ ಅವರ ಪುಣ್ಯ ತಿಥಿಯಂದು ಶ್ರದ್ಧಾಂಜಲಿ ಅರ್ಪಿಸುತ್ತ ಅವರ ಶೈಲಿಯಲ್ಲಿ "ದೇವರು ಒಳ್ಳೇದು ಮಾಡಲಿ" ಎಂದು ಹೇಳಿ ಈ ಲೇಖನಕ್ಕೆ ಪೂರ್ಣವಿರಾಮ ಹಾಕುತ್ತಿದ್ದೇನೆ.

ಕೇಳಿ, ಧಾರೇಶ್ವರರನ್ನು ಯಕ್ಶಗಾನಕ್ಕೆ ಕರೆತಂದ "ಹಿತವಾಯ್ತೆ ಪ್ರಿಯನೆ" ಹಾಡು.
ಕೇಳಿ, ನಾವಡ ಶೈಲಿಯ ಸುರುಟಿ ರಾಗದ ಹಾಡು - "ನಿನ್ನಯ ದರ್ಶನದೀ"

ನಿರೀಕ್ಷಿಸಿ :)

೧.ನಾವಡರಿಗೊಲಿದ ಮಧ್ಯಮಾವತಿ
೨.ನಾವಡ - ಧಾರೇಶ್ವರ, ಪುತ್ತೂರಿನ ಆಟವೊಂದರ ನೆನಪು (ಮತ್ತೆಲ್ಲೂ ಕೇಳಸಿಗದ ಅಪರೂಪದ ಪದ್ಯಗಳೊಂದಿಗೆ)
೩.ಕಾಳಿಂಗ ಗಾನ - ಯುಗ ಪ್ರವರ್ತಕನ ಹಾಡುಗಳ ಅಧ್ಯಯನ

ಮನಸೆಳೆದ ಕುಂಭಕರ್ಣ

ಮೇಳ: ಹೊಸನಗರ
ದಿನಾಂಕ: ೨೬ ಮೇ ೨೦೦೮
ಸ್ಥಲ: ಕಾರಿಂಜ ಆಂಜನೇಯ ದೇವಸ್ಥಾನ, ಬೆಂಗಳೂರು


ಬಹುಶ: ಇಂದಿನ ದಿನಗಳಲ್ಲಿ ಕಮರ್ಶಿಯಲ್ ಪ್ರದರ್ಶನಗಳಲ್ಲಿ ಕಾಣಸಿಗದ ಅಪರೂಪದ ಪ್ರಸಂಗ ಕುಂಭಕರ್ಣ ಕಾಳಗ. ಬಣ್ಣದ ವೇಶದ ಮೂಲಕ ಮತ್ತೆ ತೆಂಕು ತಿಟ್ಟಿನ ಸುವರ್ಣ ಯುಗವನ್ನು ನೆನಪಿಗೆ ತರುತ್ತಿರುವ ಸದಾಶಿವ ಶೆಟ್ಟಿಗಾರರ ಕುಂಭಕರ್ಣ ಈ ಪ್ರಸಂಗದ ಪ್ರಮುಖ ಆಕರ್ಶಣೆ. ದೊಂದಿಯೊಂದಿಗೆ ಸಭೆಯ ಮಧ್ಯೆ ನಡೆದಾಡುವುದು ಶೆಟ್ಟಿಗಾರರ ವಿಶೇಷತೆ. ಕುಂಭಕರ್ಣನನ್ನು ನಿದ್ದೆಯಿಂದ ಎಬ್ಬಿಸುವ ಸನ್ನಿವೇಷ, ನಿದ್ದೆಯಿಂದ ಎಚ್ಚೆತ್ತ ಕುಂಭಕರ್ಣನ ಅಟ್ಟಹಾಸ, ರಾವಣ ಕುಂಭಕರ್ಣರ ಸಂವಾದ ಯಕ್ಷರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಭಾಗವತ ಪದ್ಯಾಣ ಗಣಪತಿ ಭಟ್ಟರು ಈ ಪ್ರಸಂಗದುದ್ದಕ್ಕೂ ಬಲಿಪ ಭಾಗವತರ ಶೈಲಿಯಲ್ಲಿ ಹಾಡಿ ಪ್ರಸಂಗದ ಯಶಸ್ಸಿಗೆ ಕಾರಣರಾದರು. ಅದರಲ್ಲೂ "ತಮ್ಮ ಕೇಳೆನಗೂಂದು ತೊಡರು ಬಂದೊದಗಿತು" ಹಾಡು ಅದ್ಭುತವಾಗಿ ಮೂಡಿ ಬಂತು. ಪದ್ಯಾಣರ ಹಾಡುಗಳು ಕೇಳುಗನಿಗೆ ಸ್ಪಷ್ಟವಾದರೆ ಅವರ ಭಾಗವತಿಕೆಗೆ ಇನ್ನಷ್ಟು ರಂಗು ಬಂದೀತು.

ತೆಂಕಿನ ಹಿಮ್ಮೇಳ ಕಲಾವಿದರಲ್ಲಿ ಶಿಸ್ತು ಇಲ್ಲ ಎಂಬ ಮಾತನ್ನು ಸಮರ್ಥಿಸಲೋಸುಗವೊ ಎಂಬಂತೆ ಹಿಮ್ಮೇಳದ ಎಲ್ಲ ಕಲಾವಿದರು ಕೂಡಾ ಮುಂಡಾಸು ಧರಿಸದೆ ಪ್ರದರ್ಶನ ನೀಡಿದ್ದು ವಿಷಾದನೀಯ.

ರಾಮ ಲಕ್ಶ್ಮಣರ ವೇಷಗಾರಿಕೆಯ ಕುರಿತು ಚಿಂತಿಸುವ ಅಗತ್ಯವಿದೆ. ಮೈಬಿಟ್ಟು ಮಾಡಿದ ಈ ವೇಶಗಳು ನಾಟಕದ ವೇಶಗಳಂತೆ ಕಂಡು ಬಂದವು.

ಬೆಂಗಳೂರಿನಲ್ಲೂ ಕೂಡ, ಈ ಯಕ್ಷಗಾನಕ್ಕಾಗಿ ಪ್ರತ್ಯೇಕ ರಂಗಸ್ಥಳ ನಿರ್ಮಿಸಿದ ಸಂಘಟಕರ ಅಭಿರುಚಿಯನ್ನು ಹೊಗಳಲೇಬೇಕು.