Monday, July 14, 2008

ಮರೆತೇನೆಂದರು ಮರೆಯಲಾಗದ ಗದಾಯುದ್ಧ





ಚಿಟ್ಟಾಣಿಯವರ ಈ ವಯಸ್ಸಿನಲ್ಲಿ ಖಂಡಿತ ಇಂಥದ್ದೊಂದು ಅಮೋಘ ಕೌರವನ ಪಾತ್ರವನ್ನು ನಾನು ನಿರೀಕ್ಶಿಸಿರಲಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತ ಈ ಪ್ರದರ್ಶನದ ಕುರಿತು ಎರಡು ಮಾತು. ಮಾಗಧ ವಧೆ-ಗದಾಯುದ್ಧ ಪ್ರದರ್ಶನ ನಡೆದದ್ದು ರವೀಂದ್ರ ಕಲಾಕ್ಶೇತ್ರದ ಸಂಸ ಬಯಲು ರಂಗಮಂದಿರದಲ್ಲಿ. ಭರ್ಜರಿ ಶಾಮಿಯಾನ ಮತ್ತು ಮುಚ್ಚಿಗೆ ರಂಗಸ್ಥಳದ ವ್ಯವಸ್ಥೆ ಮಾಡಿದ್ದ ಸಂಯೋಜಕ ರಮೇಶ ಹೆಗಡೆಯವರ ಸಾಹಸವನ್ನು ಮೆಚ್ಚಲೇಬೇಕು.

ಹವ್ಯಾಸಿ ಕಲಾವಿದರಾದ ಹಾವಳಿಮನೆ ಜಿ ನ್ ಹೆಗಡೆಯವರ ಮಾಗಧನ ಬಗ್ಗೆ ಬರೆಯದಿರುವುದೇ ಕ್ಷೇಮ. ಕೆರೆಮನೆ ಶಿವರಾಮ ಹೆಗಡೆ, ಚಿಟ್ಟಾಣಿ, ಗೋಡೆ, ಕೆರೆಮನೆ ಶಂಭು ಹೆಗಡೆ, ಕೊಂಡದಕುಳಿಯಂಥ ಮಹಾನ್ ಕಲಾವಿದರು ಒಂದು ತಪಸ್ಸಿನ ರೀತಿಯಲ್ಲಿ ಕಟ್ಟಿ ಬೆಳೆಸಿದ ಯಕ್ಶಗಾನದ ಮಾಗಧನ ಕಗ್ಗೊಲೆ ನಡೆಯಲು ಖಂಡಿತ ಇಂಥದ್ದೊಂದು ವೇದಿಕೆ ಬೇಕಾಗಿರಲಿಲ್ಲ. ಹವ್ಯಾಸಿ ಕಲಾವಿದರು ವ್ರುತ್ತಿ ಕಲಾವಿದರ ಪ್ರದರ್ಶನಗಳಿಂದ ದೂರವಿದ್ದಷ್ಟೂ ಯಕ್ಶಗಾನಕ್ಕೆ ಕ್ಷೇಮ. ಶಾಲಾ ವಾರ್ಷಿಕೋತ್ಸವ, ಗಣೇಶೋತ್ಸವ ಮುಂತಾದ ವೇದಿಕೆಗಳಿರುವುದೇ, ವೇಶ ಕಟ್ಟುವ ತೆವಲು ತೀರಿಸಿಕೊಳ್ಳುವುದಕ್ಕೆ. ಅಲ್ಲಿ ಪ್ರೇಕ್ಷಕ ಕೂಡಾ ಅದೇ ಮನಸ್ತಿಥಿಯಿಂದ ಬಂದಿರುವುದರಿಂದ ಯಾರಿಗೂ ನಷ್ಟವಿಲ್ಲ. ಇಂಥ ವೇದಿಕೆಗಳಲ್ಲಿ ವೇಶ ಕಟ್ಟಿ ರಂಗಕ್ಕೆ ಬರಬಲ್ಲವನೇ ವೇಶಧಾರಿ, ತಾಳ ಹಿಡಿದು ರಂಗದಲ್ಲಿ ಕೂರಬಲ್ಲವನೇ ಭಾಗವತ. ಈ ಅನುಭವದಿಂದ ವ್ರುತ್ತಿ ಕಲಾವಿದರ ಜತೆ ಕುಣಿಯುತ್ತೇನೆ ಎಂಬುದು ’ನವಿಲ ಕಂಡು ಕೆಂಭೂತ ಕುಣಿಯಲೆತ್ನಿಸಿದಂತೆ’ ಎಂದು ವಿಧಿಯಿಲ್ಲದೆ ಹೇಳಬೇಕಾಗಿದೆ.

ಯಕ್ಶ ಮಾಗಧನ ಕಗ್ಗೊಲೆಯನ್ನು ಮರೆಸಿದ ಪ್ರದರ್ಶನ ಗದಾಯುದ್ಧ. ತೋಟಿಮನೆಯವರ ಭೀಮ, ಅಶೋಕ ಭಟ್ಟರ ಮುರಹರನ ಪಾತ್ರವೂ ಕಳೆಗಟ್ಟಿತ್ತು. ಚಿಟ್ಟಾಣಿಯವರ ಕೌರವನಂತೂ ಕಣ್ಣಿಗೆ ಹಬ್ಬ. ಜಲದಿಂದ ಎದ್ದು ಬಂದವನು ಚಿಟ್ಟಾಣಿಯಲ್ಲ..ಪಾಂಡವರ ತಲೆಯ ಬಡಿವೆನು ಎಂದು ಛಲದಿಂದೆದ್ದ ಬಂದ ಕುರುಕ್ಷೇತ್ರದ ಕೌರವನೇ ಇರಬೇಕು ಎಂದು ನೋಡುಗರಿಗನಿಸಿದ್ದು ಸುಳ್ಳಲ್ಲ. ಮಯ್ಯ ಬಾಗು ಬಳುಕು, ಹುಬ್ಬು ಮತ್ತು ಕಣ್ಣುಗಳ ಸಾಟಿಯಿಲ್ಲದ ಚಲನೆ, ಭಾವಕ್ಕನುಗುಣವಾಗಿ ಬಿರಿಯುವ, ಮುದುಡುವ ತುಟಿಗಳು, ಸನ್ನಿವೇಶಕ್ಕೆ ತಕ್ಕಂತೆ ಆಯ ಆಕಾರವನ್ನು ಪಡೆಯುವ ತೋಳುಗಳು, ಎಣೆಯಿಲ್ಲದ ಹಸ್ತಾಭಿನಯ - ಚಿಟ್ಟಾಣಿಯವರಿಗೆ ಚಿಟ್ಟಾಣಿಯವರೇ ಸಾಟಿ.

ವಿಶೇಷವೆಂದರೆ ಭಾಗವತ ಕೊಳಗಿಯವರು ಧಾರೇಶ್ವರ ನಿರ್ಮಿತ ’ನೋಡಿದಂ ವಿಶ್ವಾಧಾರ ಮೂರ್ತಿಯಂ’ ಎಂಬ ಭಾಮಿನಿಯನ್ನು ಕಪಟ ನಾಟಕ ರಂಗ ಪದ್ಯಕ್ಕೆ ಮೊದಲು ಬಳಸಿಕೊಂಡದ್ದು. ಭಾಗವತ ಸುಬ್ರಮಣ್ಯ ಧಾರೇಶ್ವರರ ಕಲ್ಪನೆಯ ಈ ಸನ್ನಿವೇಶ ಈಗ ಬಹುತೇಕ ಒಂದು ಸಂಪ್ರದಾಯದಂತೆಯೇ ಬಳಸಲ್ಪಡುತ್ತಿದೆ. ತಮ್ಮ ಛಲದಂಕ ಚಕ್ರೇಶ್ವರ ಪ್ರಸಂಗದಲ್ಲಿ ಧಾರೇಶ್ವರರು ಈ ಪದ್ಯವನ್ನು ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಬರೆಯಿಸಿ, ಮೊದಲ ಬಾರಿಗೆ ಚಿಟ್ಟಾಣಿಯವರ ಕೌರವನಿಗೆ ಬಳಸಿದರು. ಕೌರವ ತನ್ನ ಅಂತರಂಗ ವಿಮರ್ಶೆ ಮಾಡಿಕೊಳ್ಳುವ ಈ ಭಾಮಿನಿಗೆ ಚಿಟ್ಟಾಣಿಯವರ ಅಭಿನಯ ಅದ್ಭುತ. ಕೊಳಗಿಯವರ ಭಾಗವತಿಕೆ , ಶಂಕರ ಭಾಗವತ ಮತ್ತು ವಿಘ್ನೇಶ್ವರ ಕೆಸರಕೊಪ್ಪ ಅವರ ಹಿಮ್ಮೇಳ ಉತ್ತಮವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೊಳಗಿಯವರ ಭಾಗವತಿಕೆಗೆ ಕಳೆಯೇರುತ್ತಿದೆ.

ಒಟ್ಟಿನಲ್ಲಿ ಈ ಗದಾಯುದ್ಧ ’ಮರೆತೇನೆಂದರು ಮರೆಯಲಾಗದ’ ಪ್ರದರ್ಶನ ! ಸಂಯೋಜಕರಿಗೆ ಯಕ್ಷ ರಸಿಕರ ಪರವಾಗಿ ಅಭಿನಂದನೆಗಳು, ಅಭಿವಂದನೆಗಳು!

Tuesday, July 8, 2008

ಅಮ್ಮಣ್ಣಾಯರು ಬಡಗಿಗೆ?




ಭಾಗವತ ದಿನೇಶ ಅಮ್ಮಣ್ಣಾಯರು ಸಾಲಿಗ್ರಾಮ ಮೇಳದ ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾರೆ ಎಂಬ ಪತ್ರಿಕಾ ಜಾಹೀರಾತು ಕಾಣಿಸಿಕೊಂಡಿದೆ. ಕೆಲವು ವರ್ಶದ ಹಿಂದೆ ಅಮ್ಮಣ್ಣಾಯರಿಗೆ ಸಾಲಿಗ್ರಾಮ ಮೇಳದಿಂದ ಕರೆ ಬಂದ ವರ್ತಮಾನವಿತ್ತು. ಏಕೋ ಏನೋ ಅವರು ಆಗ ಬಡಗು ತಿಟ್ಟಿಗೆ ಬರುವ ಮನಸ್ಸು ಮಾಡಿರಲಿಲ್ಲ. ಅಮ್ಮಣ್ಣಾಯರಂತ ಹಿರಿಯ ಭಾಗವತರಿಗೆ ಬಡಗು ತಿಟ್ಟಿಗೆ ಹೊಂದಿಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಒಂದು ಸಾಲಿಗ್ರಾಮ ಮೇಳದಲ್ಲಿ ಯಾಜಿಯವರದ್ದೇ ಕೊನೆಯ ಮಾತು. ಇನ್ನೊಂದು ಬಡಗು ತಿಟ್ಟಿನಲ್ಲಿರುವ ಹಲವು ವೈವಿಧ್ಯಗಳನ್ನು ಕರಗತ ಮಾಡಲು ಸಾಮನ್ಯವಾಗಿ ಒಬ್ಬ ಭಾಗವತಕನಿಗೆ ಸುಮಾರು ಐದು ವರುಶಗಳು ಬೇಕು. ಈ ವೈವಿಧ್ಯಗಳ ಅನುಭವವಿಲ್ಲದೆ ಬಡಗು ತಿಟ್ಟಿನಲ್ಲಿ ಭಾಗವತಕನಾಗಿ ಮಿಂಚುವುದು ಸುಲಭವಲ್ಲ. ಈ ಸವಾಲುಗಳ ಮಧ್ಯೆ ಅಮ್ಮಣ್ಣಾಯರು ಎಷ್ಟು ಯಶಸ್ವಿಯಾಗುತ್ತಾರೆ ಎಂದು ಹೇಳುವುದು ಕಷ್ಟ. ಇತ್ತೀಚಿನ ವರ್ಷಗಳಲ್ಲಿ ಸಾಲಿಗ್ರಾಮ ಮೇಳ ಹೆಚ್ಚಾಗಿ ಆಡುವುದು ಹೊಸ ಪ್ರಸಂಗಗಳನ್ನೆ. ಹೊಸ ಪ್ರಸಂಗಗಳಲ್ಲಿ ಸಿನೆಮಾ, ಸಂಗೀತದ ಹಾಡುಗಳನ್ನು ತುರುಕುವುದು ಸುಲಭ. ಈ ಕಾರಣದಿಂದಾಗಿ ಅಮ್ಮಣ್ಣಾಯರು ಬಡಗು ತಿಟ್ಟಿನಲ್ಲಿ ಒಂದು ಹೊಸ ಅಲೆ ಎಬ್ಬಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

Wednesday, July 2, 2008

ಮೇಳ ನಿಲ್ಲುವುದು ಎಂಬ ಸುದ್ದಿ..

ಹೊಸ ಯಕ್ಷಗಾನದ ಮೇಳ ಹೊರಟಾಗ ಸುದ್ದಿಯಾಗುವಂತೆ, ಮೇಳ ನಿಂತಾಗ ಸುದ್ದಿಯಾಗುವುದು ಕಡಿಮೆಯೇ. ಅಲ್ಲಲ್ಲಿ ಮಾತಿನ ನಡುವೆ ಆ ಮೇಳ ಮುಂದಿನ ವರ್ಷದಿಂದ ಇಲ್ಲವಂತೆ ಎಂಬ ಮಾತು ಬಿಟ್ಟರೆ ಪತ್ರಿಕೆಯಲ್ಲಂತೂ ಸುದ್ದಿಯಾಗುವುದು ತೀರಾ ಅಪರೂಪವೇ. ಇತ್ತೀಚೆಗೆ ಎಡನೀರು ಮೇಳ ಮಾತ್ರ ಬೇರೆಯೇ ಕಾರಣಕ್ಕೆ ಪತ್ರಿಕೆಗಳಲ್ಲಿ ಸುದ್ದಿಯಾದದದ್ದು ಒಂದು ದುರಂತ ಎನ್ನಬೇಕಷ್ಟೆ.

ಮೂಲಗಳನ್ನು ನಂಬುವುದಾದರೆ, ಎಡನೀರು ಮೇಳ ಇತಿಹಾಸವನ್ನು ಸೇರುವುದು ಖಚಿತ. ನಾಲ್ಕು ವರುಶಗಳ ಹಿಂದೆ, ತೆಂಕು ತಿಟ್ಟಿನ ಗಜಮೇಳವಾಗಿ ಡೇರೆ ಮೇಳವಾಗಿ ತಿರುಗಾಟಕ್ಕೆ ಹೊರಟ ಎಡನೀರು ಮೇಳ ಬಹುಶ: ಇನ್ನೊಂದು ನೆನಪು ಮಾತ್ರ. ಪದ್ಯಾಣ, ಅಮ್ಮಣ್ಣಾಯ, ಶಬರಾಯ ಮುಂತಾದ ಪ್ರಸಿದ್ಧ ಭಾಗವತರನ್ನು ಒಳಗೊಂಡ ಎಡನೀರು ಮೇಳ ತೆಂಕು ತಿಟ್ಟಿನ ಯಕ್ಶಗಾನವನ್ನು ಪುನರುತ್ಥಾನ ಮಾಡುವುದೆಂದೇ ಕಲಾಭಿಮಾನಿಗಳು ನಂಬಿದ್ದರು. ಮೊದಲ ತಿರುಗಾಟದಲ್ಲಿ ತುಳು ಪ್ರಸಂಗಗಳನ್ನು ಬಿಡಲೊಲ್ಲದೆ, ಪೌರಾಣಿಕ ಪ್ರಿಯರ ಅಸಮಾಧಾನಕ್ಕೆ ಗುರಿಯಾದರೂ ತನ್ನ ಮಿತಿಯೊಳಗೆ ಈ ಮೇಳ ಅಲ್ಲಲ್ಲಿ ಉತ್ತಮ ಪೌರಾಣಿಕ ಪ್ರದರ್ಶನಗಳನ್ನು ಪ್ರದರ್ಶಿಸಿ, ಕಲಾಭಿಮಾನಿಗಳಲ್ಲಿ ಆಸೆಯ ಮಿಂಚೊಂದನ್ನು ಹರಿಸಿದ್ದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಬಹುಶ: ಎರಡನೇ ತಿರುಗಾಟದಲ್ಲಿ ಎಂದು ನನ್ನ ನೆನಪು. ಮೊತ್ತ ಮೊದಲ ಬಾರಿಗೆ ಯಕ್ಷಗಾನ ಪ್ರಪಂಚದ ರಾಜಕೀಯ ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಯಿತು. ಮಠಾಧಿಪತಿಯೊಬ್ಬರಿಂದ ಪದ್ಯಾಣ ಭಾಗವತರಿಗೆ ಅವಮಾನವಾಯಿತು ಎಂಬ ಕಾರಣಕ್ಕಾಗಿಯೇ ಎಡನೀರು ಮೇಳ ಎರಡು ಹೋಳಾಗಿ, ಹೊಸನಗರ ಮೇಳ ಜನ್ಮ ತಾಳಿತು. ಪ್ರಮುಖ ಕಲಾವಿದರ ಒಂದು ಗುಂಪು ಹೊಸನಗರ ಮೇಳವನ್ನು ಸೇರಿತು. ಒಂದು ವರುಶ ತಿರುಗಾಟವನ್ನು ಮುಗಿಸಿದ ಎಡನೀರು ಮೇಳ, ಈ ವರುಶದ ತಿರುಗಾಟದಲ್ಲಿ ಬೇರೆಯೇ ಕಾರಣಕ್ಕಾಗಿ ಸುದ್ದಿಯಾಯಿತು. ಪೆರ್ಡೂರು ಮೇಳದ ನಾಗವಲ್ಲಿ ಪ್ರಸಂಗವನ್ನು ಅನುಕರಿಸಿ ನಾಗನಿಧಿ ಎಂಬ ಪ್ರಸಂಗವನ್ನು ಎರಡು ರಂಗಸ್ಥಳಗಳೊಂದಿಗೆ ಪ್ರದರ್ಶಿಸಿದರೂ ಪ್ರಸಂಗ ದಯನೀಯ ಸೋಲನ್ನನುಭವಿಸಿತು. ಒಂದು ಕಾಲಕ್ಕೆ ತುಳು ಪ್ರಸಂಗಗಳ ನಿರ್ದೇಶನಕ್ಕೆ ಹೆಸರಾಗಿದ್ದ ಅಮ್ಮಣ್ಣಾಯರು ಕೂಡಾ ಈ ಸೋಲಿನಿಂದ ಮಂಕಾದರು. ಬಹುತೇಕ ಈ ತಿರುಗಾಟದ ಎಲ್ಲ ಪ್ರಸಂಗಗಳು ಏಡನೀರಿನಲ್ಲಿ ಸೇವೆಯ ರೂಪದಲ್ಲೇ ನಡೆದುವು. ಪುತ್ತೂರಿನ ಜಾತ್ರೆಯ ಸಮಯದಲ್ಲಿ ಶನೀಶ್ವರ ಮಹಾತ್ಮೆ ಮತ್ತು ಅಗ್ರಪೂಜೆ ಎಂಬ ಎರಡು ಪ್ರದರ್ಶನಗಳು ನಿಗದಿಯಾಗಿದ್ದವು. ಆದರ ಕಲಾವಿದರ ಕೊರತೆಯಿಂದಾಗಿ ಅಗ್ರಪೂಜೆ ಪ್ರಸಂಗವೇ ನಡೆಯದೆ, ಮೇಳ ಮುಳುಗುತ್ತಿರುವ ಹಡಗು ಎಂಬ ಅಭಿಪ್ರಾಯವನ್ನು ಕಲಾಭಿಮಾನಿಗಳಲ್ಲಿ ಮೂಡಿಸಿತ್ತು.

ರಂಗದ ಹಿಂದೆ ಮೇಳದ ಮೆನೇಜರ್ (ಕಲಾವಿದರೂ ಹೌದು) ಮತ್ತು ಇನ್ನೋರ್ವ ಕಲಾವಿದರ ನಡುವೆ ಕಾಳಗ ನಡೆದು ಆ ದಿನ ಪ್ರದರ್ಷನ ರದ್ದಾದದ್ದು ಈಗ ಗುಟ್ಟೇನೂ ಅಲ್ಲ. ಬೆಂಗಳೂರಿನ ಪ್ರದರ್ಶನದ ವೇಳೆಗೆ ಕಲಾವಿದರು ಒಮ್ಮೆ ಈ ಬಾರಿಯ ತಿರುಗಾಟ ಮುಗಿದರೆ ಸಾಕು ಎಂಬ ಸ್ಥಿತಿ ತಲಪಿದ್ದರು. ಒಂದು ವರ್ತಮಾನದ ಪ್ರಕಾರ ಕೊನೆಯ ಸೇವೆಯಾಟವೇ ನಡೆದಿಲ್ಲವಂತೆ. ಈಗಾಗಲೇ ಕೆಲವು ಕಲಾವಿದರು ಬೇರೆ ಮೇಳವನ್ನು ಸೇರಿಯಾಗಿದೆ. ತಾಳಮದ್ದಲೆ ಕ್ಶೇತ್ರದಲ್ಲಿ ಪರಿಣಿತರಾದ ಮಾತುಗಾರ ಕಲಾವಿದರೊಬ್ಬರು ಹೊಸನಗರ ಮೇಳವನ್ನು ಸೇರಿದ್ದಾರೆ ಎಂಬ ಸುದ್ದಿ. ಇದು ಹೊಸನಗರ ಮೇಳಕ್ಕೆ ಎಷ್ಟು ’ಚೆನ್ನ’ ವೋ ತಿಳಿಯದು. ಮಾತುಗಾರರಿಂದಾಗಿ ಸಾಮಾನ್ಯ ಪ್ರೇಕ್ಷಕನಿಂದ ದೂರವಾಗಿದ್ದ ತೆಂಕು ತಿಟ್ಟು ಯಕ್ಶಗಾನ ಮತ್ತೆ ಮಾತುಗಾರರ ಸೇರ್ಪಡೆಗೆ ಹಾತೊರೆಯುವುದು ಒಂದು ದುರಂತವೇ.

ಹೊಸನಗರ ಮೇಳವಾಗಲೀ, ಎಡನೀರು ಮೇಳವಾಗಲಿ ಕಮರ್ಷಿಯಲ್ ಸಕ್ಸೆಸ್ ಪಡೆದ ಮೇಳಗಳಲ್ಲ.ಈ ಮೇಳಗಳ ಪ್ರದರ್ಶನಗಳಾಗುವುದು ಬಹುತೇಕ ಮಠಗಳ ಭಕ್ತಾದಿಗಳಿಂದ ಅಥವಾ ತೆಂಕುತಿಟ್ಟಿನ ’ಹಿತರಕ್ಷಕ’ರ ಸಹಕಾರದಿಂದ. ಈ ಹಿನ್ನಲೆಯಲ್ಲಿ ಹೊಸನಗರ ಮೇಳ ಎಷ್ಟು ವರುಶ ತಿರುಗಾಟ ಮಾಡಲು ಶಕ್ತವಾಗಬಹುದು ಎಂಬುದು ಕುತೂಹಲದ ವಿಶಯ.


ತೆಂಕಿನ ಪ್ರಸಿದ್ಧ ಭಾಗವತರಾದ ದಿನೇಶ ಅಮ್ಮಣ್ಣಾಯರಿಗೆ ಈ ವರ್ಶ ಮೇಳವಿಲ್ಲ. ಕರ್ಣಾಟಕ ಮೇಳ ನಿಂತ ಬಳಿಕ ಅಮ್ಮಣ್ಣಾಯರು ಕೆಲವು ವರ್ಷ ಮೇಳದ ತಿರುಗಾಟದಿಂದ ದೂರವುಳಿದು ಬಳಿಕ ಕದ್ರಿ ಮೇಳದಲ್ಲಿ ತಿರುಗಾಟವನ್ನು ನಡೆಸಿದ್ದರು. ಕದ್ರಿ ಮೇಳ ನಿಂತ ಬಳಿಕ ಎಡನೀರು ಮೇಳ ಸೇರಿದ್ದ ತೆಂಕಿನ ಗಾನಕೋಗಿಲೆ ಈ ಬಾರಿ ಮೇಳದ ರಂಗಸ್ಥಳದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ಕಲಾಭಿಮಾನಿಗಲಲ್ಲಿ ನಿರಾಸೆಯನ್ನು ಮೂಡಿಸಿದೆ.

ಅಮ್ಮಣ್ಣಾಯರಿಗೆ ಶುಭ ಹಾರೈಸುತ್ತಾ, ಅವರು ಬೇಗನೆ ಮೇಳದ ಪ್ರದರ್ಶನದಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸುತ್ತೇನೆ.

ಕೇಳಿ, ಎಡನೀರು ಮೇಳದ ಪ್ರದರ್ಶನದಲ್ಲಿ ಕೇಳಿಬಂದ ಅಮ್ಮಣ್ಣಾಯರ "ದೀಪಕ ರಾಗವ ಹಾಡಿದ" ಪದ್ಯ, ಪ್ರಸಂಗ ಶನಿ ಮಹಾತ್ಮೆ.