Wednesday, July 2, 2008

ಮೇಳ ನಿಲ್ಲುವುದು ಎಂಬ ಸುದ್ದಿ..

ಹೊಸ ಯಕ್ಷಗಾನದ ಮೇಳ ಹೊರಟಾಗ ಸುದ್ದಿಯಾಗುವಂತೆ, ಮೇಳ ನಿಂತಾಗ ಸುದ್ದಿಯಾಗುವುದು ಕಡಿಮೆಯೇ. ಅಲ್ಲಲ್ಲಿ ಮಾತಿನ ನಡುವೆ ಆ ಮೇಳ ಮುಂದಿನ ವರ್ಷದಿಂದ ಇಲ್ಲವಂತೆ ಎಂಬ ಮಾತು ಬಿಟ್ಟರೆ ಪತ್ರಿಕೆಯಲ್ಲಂತೂ ಸುದ್ದಿಯಾಗುವುದು ತೀರಾ ಅಪರೂಪವೇ. ಇತ್ತೀಚೆಗೆ ಎಡನೀರು ಮೇಳ ಮಾತ್ರ ಬೇರೆಯೇ ಕಾರಣಕ್ಕೆ ಪತ್ರಿಕೆಗಳಲ್ಲಿ ಸುದ್ದಿಯಾದದದ್ದು ಒಂದು ದುರಂತ ಎನ್ನಬೇಕಷ್ಟೆ.

ಮೂಲಗಳನ್ನು ನಂಬುವುದಾದರೆ, ಎಡನೀರು ಮೇಳ ಇತಿಹಾಸವನ್ನು ಸೇರುವುದು ಖಚಿತ. ನಾಲ್ಕು ವರುಶಗಳ ಹಿಂದೆ, ತೆಂಕು ತಿಟ್ಟಿನ ಗಜಮೇಳವಾಗಿ ಡೇರೆ ಮೇಳವಾಗಿ ತಿರುಗಾಟಕ್ಕೆ ಹೊರಟ ಎಡನೀರು ಮೇಳ ಬಹುಶ: ಇನ್ನೊಂದು ನೆನಪು ಮಾತ್ರ. ಪದ್ಯಾಣ, ಅಮ್ಮಣ್ಣಾಯ, ಶಬರಾಯ ಮುಂತಾದ ಪ್ರಸಿದ್ಧ ಭಾಗವತರನ್ನು ಒಳಗೊಂಡ ಎಡನೀರು ಮೇಳ ತೆಂಕು ತಿಟ್ಟಿನ ಯಕ್ಶಗಾನವನ್ನು ಪುನರುತ್ಥಾನ ಮಾಡುವುದೆಂದೇ ಕಲಾಭಿಮಾನಿಗಳು ನಂಬಿದ್ದರು. ಮೊದಲ ತಿರುಗಾಟದಲ್ಲಿ ತುಳು ಪ್ರಸಂಗಗಳನ್ನು ಬಿಡಲೊಲ್ಲದೆ, ಪೌರಾಣಿಕ ಪ್ರಿಯರ ಅಸಮಾಧಾನಕ್ಕೆ ಗುರಿಯಾದರೂ ತನ್ನ ಮಿತಿಯೊಳಗೆ ಈ ಮೇಳ ಅಲ್ಲಲ್ಲಿ ಉತ್ತಮ ಪೌರಾಣಿಕ ಪ್ರದರ್ಶನಗಳನ್ನು ಪ್ರದರ್ಶಿಸಿ, ಕಲಾಭಿಮಾನಿಗಳಲ್ಲಿ ಆಸೆಯ ಮಿಂಚೊಂದನ್ನು ಹರಿಸಿದ್ದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಬಹುಶ: ಎರಡನೇ ತಿರುಗಾಟದಲ್ಲಿ ಎಂದು ನನ್ನ ನೆನಪು. ಮೊತ್ತ ಮೊದಲ ಬಾರಿಗೆ ಯಕ್ಷಗಾನ ಪ್ರಪಂಚದ ರಾಜಕೀಯ ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಯಿತು. ಮಠಾಧಿಪತಿಯೊಬ್ಬರಿಂದ ಪದ್ಯಾಣ ಭಾಗವತರಿಗೆ ಅವಮಾನವಾಯಿತು ಎಂಬ ಕಾರಣಕ್ಕಾಗಿಯೇ ಎಡನೀರು ಮೇಳ ಎರಡು ಹೋಳಾಗಿ, ಹೊಸನಗರ ಮೇಳ ಜನ್ಮ ತಾಳಿತು. ಪ್ರಮುಖ ಕಲಾವಿದರ ಒಂದು ಗುಂಪು ಹೊಸನಗರ ಮೇಳವನ್ನು ಸೇರಿತು. ಒಂದು ವರುಶ ತಿರುಗಾಟವನ್ನು ಮುಗಿಸಿದ ಎಡನೀರು ಮೇಳ, ಈ ವರುಶದ ತಿರುಗಾಟದಲ್ಲಿ ಬೇರೆಯೇ ಕಾರಣಕ್ಕಾಗಿ ಸುದ್ದಿಯಾಯಿತು. ಪೆರ್ಡೂರು ಮೇಳದ ನಾಗವಲ್ಲಿ ಪ್ರಸಂಗವನ್ನು ಅನುಕರಿಸಿ ನಾಗನಿಧಿ ಎಂಬ ಪ್ರಸಂಗವನ್ನು ಎರಡು ರಂಗಸ್ಥಳಗಳೊಂದಿಗೆ ಪ್ರದರ್ಶಿಸಿದರೂ ಪ್ರಸಂಗ ದಯನೀಯ ಸೋಲನ್ನನುಭವಿಸಿತು. ಒಂದು ಕಾಲಕ್ಕೆ ತುಳು ಪ್ರಸಂಗಗಳ ನಿರ್ದೇಶನಕ್ಕೆ ಹೆಸರಾಗಿದ್ದ ಅಮ್ಮಣ್ಣಾಯರು ಕೂಡಾ ಈ ಸೋಲಿನಿಂದ ಮಂಕಾದರು. ಬಹುತೇಕ ಈ ತಿರುಗಾಟದ ಎಲ್ಲ ಪ್ರಸಂಗಗಳು ಏಡನೀರಿನಲ್ಲಿ ಸೇವೆಯ ರೂಪದಲ್ಲೇ ನಡೆದುವು. ಪುತ್ತೂರಿನ ಜಾತ್ರೆಯ ಸಮಯದಲ್ಲಿ ಶನೀಶ್ವರ ಮಹಾತ್ಮೆ ಮತ್ತು ಅಗ್ರಪೂಜೆ ಎಂಬ ಎರಡು ಪ್ರದರ್ಶನಗಳು ನಿಗದಿಯಾಗಿದ್ದವು. ಆದರ ಕಲಾವಿದರ ಕೊರತೆಯಿಂದಾಗಿ ಅಗ್ರಪೂಜೆ ಪ್ರಸಂಗವೇ ನಡೆಯದೆ, ಮೇಳ ಮುಳುಗುತ್ತಿರುವ ಹಡಗು ಎಂಬ ಅಭಿಪ್ರಾಯವನ್ನು ಕಲಾಭಿಮಾನಿಗಳಲ್ಲಿ ಮೂಡಿಸಿತ್ತು.

ರಂಗದ ಹಿಂದೆ ಮೇಳದ ಮೆನೇಜರ್ (ಕಲಾವಿದರೂ ಹೌದು) ಮತ್ತು ಇನ್ನೋರ್ವ ಕಲಾವಿದರ ನಡುವೆ ಕಾಳಗ ನಡೆದು ಆ ದಿನ ಪ್ರದರ್ಷನ ರದ್ದಾದದ್ದು ಈಗ ಗುಟ್ಟೇನೂ ಅಲ್ಲ. ಬೆಂಗಳೂರಿನ ಪ್ರದರ್ಶನದ ವೇಳೆಗೆ ಕಲಾವಿದರು ಒಮ್ಮೆ ಈ ಬಾರಿಯ ತಿರುಗಾಟ ಮುಗಿದರೆ ಸಾಕು ಎಂಬ ಸ್ಥಿತಿ ತಲಪಿದ್ದರು. ಒಂದು ವರ್ತಮಾನದ ಪ್ರಕಾರ ಕೊನೆಯ ಸೇವೆಯಾಟವೇ ನಡೆದಿಲ್ಲವಂತೆ. ಈಗಾಗಲೇ ಕೆಲವು ಕಲಾವಿದರು ಬೇರೆ ಮೇಳವನ್ನು ಸೇರಿಯಾಗಿದೆ. ತಾಳಮದ್ದಲೆ ಕ್ಶೇತ್ರದಲ್ಲಿ ಪರಿಣಿತರಾದ ಮಾತುಗಾರ ಕಲಾವಿದರೊಬ್ಬರು ಹೊಸನಗರ ಮೇಳವನ್ನು ಸೇರಿದ್ದಾರೆ ಎಂಬ ಸುದ್ದಿ. ಇದು ಹೊಸನಗರ ಮೇಳಕ್ಕೆ ಎಷ್ಟು ’ಚೆನ್ನ’ ವೋ ತಿಳಿಯದು. ಮಾತುಗಾರರಿಂದಾಗಿ ಸಾಮಾನ್ಯ ಪ್ರೇಕ್ಷಕನಿಂದ ದೂರವಾಗಿದ್ದ ತೆಂಕು ತಿಟ್ಟು ಯಕ್ಶಗಾನ ಮತ್ತೆ ಮಾತುಗಾರರ ಸೇರ್ಪಡೆಗೆ ಹಾತೊರೆಯುವುದು ಒಂದು ದುರಂತವೇ.

ಹೊಸನಗರ ಮೇಳವಾಗಲೀ, ಎಡನೀರು ಮೇಳವಾಗಲಿ ಕಮರ್ಷಿಯಲ್ ಸಕ್ಸೆಸ್ ಪಡೆದ ಮೇಳಗಳಲ್ಲ.ಈ ಮೇಳಗಳ ಪ್ರದರ್ಶನಗಳಾಗುವುದು ಬಹುತೇಕ ಮಠಗಳ ಭಕ್ತಾದಿಗಳಿಂದ ಅಥವಾ ತೆಂಕುತಿಟ್ಟಿನ ’ಹಿತರಕ್ಷಕ’ರ ಸಹಕಾರದಿಂದ. ಈ ಹಿನ್ನಲೆಯಲ್ಲಿ ಹೊಸನಗರ ಮೇಳ ಎಷ್ಟು ವರುಶ ತಿರುಗಾಟ ಮಾಡಲು ಶಕ್ತವಾಗಬಹುದು ಎಂಬುದು ಕುತೂಹಲದ ವಿಶಯ.


ತೆಂಕಿನ ಪ್ರಸಿದ್ಧ ಭಾಗವತರಾದ ದಿನೇಶ ಅಮ್ಮಣ್ಣಾಯರಿಗೆ ಈ ವರ್ಶ ಮೇಳವಿಲ್ಲ. ಕರ್ಣಾಟಕ ಮೇಳ ನಿಂತ ಬಳಿಕ ಅಮ್ಮಣ್ಣಾಯರು ಕೆಲವು ವರ್ಷ ಮೇಳದ ತಿರುಗಾಟದಿಂದ ದೂರವುಳಿದು ಬಳಿಕ ಕದ್ರಿ ಮೇಳದಲ್ಲಿ ತಿರುಗಾಟವನ್ನು ನಡೆಸಿದ್ದರು. ಕದ್ರಿ ಮೇಳ ನಿಂತ ಬಳಿಕ ಎಡನೀರು ಮೇಳ ಸೇರಿದ್ದ ತೆಂಕಿನ ಗಾನಕೋಗಿಲೆ ಈ ಬಾರಿ ಮೇಳದ ರಂಗಸ್ಥಳದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ಕಲಾಭಿಮಾನಿಗಲಲ್ಲಿ ನಿರಾಸೆಯನ್ನು ಮೂಡಿಸಿದೆ.

ಅಮ್ಮಣ್ಣಾಯರಿಗೆ ಶುಭ ಹಾರೈಸುತ್ತಾ, ಅವರು ಬೇಗನೆ ಮೇಳದ ಪ್ರದರ್ಶನದಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸುತ್ತೇನೆ.

ಕೇಳಿ, ಎಡನೀರು ಮೇಳದ ಪ್ರದರ್ಶನದಲ್ಲಿ ಕೇಳಿಬಂದ ಅಮ್ಮಣ್ಣಾಯರ "ದೀಪಕ ರಾಗವ ಹಾಡಿದ" ಪದ್ಯ, ಪ್ರಸಂಗ ಶನಿ ಮಹಾತ್ಮೆ.

2 comments:

ಚೆ೦ಬಾರ್ಪು said...

adhbhuta himmeLa hondidda eDaneer mELa itihasa seruvantadaddu, yaksharangada rajakeeya mELagaLannu nunguvastara mattige beLedaddu bahala besarada vishaya

ಸುಬ್ರಹ್ಮಣ್ಯ ಭಟ್ said...

ಎಡನೀರು ಮೇಳದ ಪ್ರದರ್ಶನದಲ್ಲಿ ಕೇಳಿಬಂದ ಅಮ್ಮಣ್ಣಾಯರ "ದೀಪಕ ರಾಗವ ಹಾಡಿದ" ಪದ್ಯ
ellide ?