Monday, July 14, 2008

ಮರೆತೇನೆಂದರು ಮರೆಯಲಾಗದ ಗದಾಯುದ್ಧ





ಚಿಟ್ಟಾಣಿಯವರ ಈ ವಯಸ್ಸಿನಲ್ಲಿ ಖಂಡಿತ ಇಂಥದ್ದೊಂದು ಅಮೋಘ ಕೌರವನ ಪಾತ್ರವನ್ನು ನಾನು ನಿರೀಕ್ಶಿಸಿರಲಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತ ಈ ಪ್ರದರ್ಶನದ ಕುರಿತು ಎರಡು ಮಾತು. ಮಾಗಧ ವಧೆ-ಗದಾಯುದ್ಧ ಪ್ರದರ್ಶನ ನಡೆದದ್ದು ರವೀಂದ್ರ ಕಲಾಕ್ಶೇತ್ರದ ಸಂಸ ಬಯಲು ರಂಗಮಂದಿರದಲ್ಲಿ. ಭರ್ಜರಿ ಶಾಮಿಯಾನ ಮತ್ತು ಮುಚ್ಚಿಗೆ ರಂಗಸ್ಥಳದ ವ್ಯವಸ್ಥೆ ಮಾಡಿದ್ದ ಸಂಯೋಜಕ ರಮೇಶ ಹೆಗಡೆಯವರ ಸಾಹಸವನ್ನು ಮೆಚ್ಚಲೇಬೇಕು.

ಹವ್ಯಾಸಿ ಕಲಾವಿದರಾದ ಹಾವಳಿಮನೆ ಜಿ ನ್ ಹೆಗಡೆಯವರ ಮಾಗಧನ ಬಗ್ಗೆ ಬರೆಯದಿರುವುದೇ ಕ್ಷೇಮ. ಕೆರೆಮನೆ ಶಿವರಾಮ ಹೆಗಡೆ, ಚಿಟ್ಟಾಣಿ, ಗೋಡೆ, ಕೆರೆಮನೆ ಶಂಭು ಹೆಗಡೆ, ಕೊಂಡದಕುಳಿಯಂಥ ಮಹಾನ್ ಕಲಾವಿದರು ಒಂದು ತಪಸ್ಸಿನ ರೀತಿಯಲ್ಲಿ ಕಟ್ಟಿ ಬೆಳೆಸಿದ ಯಕ್ಶಗಾನದ ಮಾಗಧನ ಕಗ್ಗೊಲೆ ನಡೆಯಲು ಖಂಡಿತ ಇಂಥದ್ದೊಂದು ವೇದಿಕೆ ಬೇಕಾಗಿರಲಿಲ್ಲ. ಹವ್ಯಾಸಿ ಕಲಾವಿದರು ವ್ರುತ್ತಿ ಕಲಾವಿದರ ಪ್ರದರ್ಶನಗಳಿಂದ ದೂರವಿದ್ದಷ್ಟೂ ಯಕ್ಶಗಾನಕ್ಕೆ ಕ್ಷೇಮ. ಶಾಲಾ ವಾರ್ಷಿಕೋತ್ಸವ, ಗಣೇಶೋತ್ಸವ ಮುಂತಾದ ವೇದಿಕೆಗಳಿರುವುದೇ, ವೇಶ ಕಟ್ಟುವ ತೆವಲು ತೀರಿಸಿಕೊಳ್ಳುವುದಕ್ಕೆ. ಅಲ್ಲಿ ಪ್ರೇಕ್ಷಕ ಕೂಡಾ ಅದೇ ಮನಸ್ತಿಥಿಯಿಂದ ಬಂದಿರುವುದರಿಂದ ಯಾರಿಗೂ ನಷ್ಟವಿಲ್ಲ. ಇಂಥ ವೇದಿಕೆಗಳಲ್ಲಿ ವೇಶ ಕಟ್ಟಿ ರಂಗಕ್ಕೆ ಬರಬಲ್ಲವನೇ ವೇಶಧಾರಿ, ತಾಳ ಹಿಡಿದು ರಂಗದಲ್ಲಿ ಕೂರಬಲ್ಲವನೇ ಭಾಗವತ. ಈ ಅನುಭವದಿಂದ ವ್ರುತ್ತಿ ಕಲಾವಿದರ ಜತೆ ಕುಣಿಯುತ್ತೇನೆ ಎಂಬುದು ’ನವಿಲ ಕಂಡು ಕೆಂಭೂತ ಕುಣಿಯಲೆತ್ನಿಸಿದಂತೆ’ ಎಂದು ವಿಧಿಯಿಲ್ಲದೆ ಹೇಳಬೇಕಾಗಿದೆ.

ಯಕ್ಶ ಮಾಗಧನ ಕಗ್ಗೊಲೆಯನ್ನು ಮರೆಸಿದ ಪ್ರದರ್ಶನ ಗದಾಯುದ್ಧ. ತೋಟಿಮನೆಯವರ ಭೀಮ, ಅಶೋಕ ಭಟ್ಟರ ಮುರಹರನ ಪಾತ್ರವೂ ಕಳೆಗಟ್ಟಿತ್ತು. ಚಿಟ್ಟಾಣಿಯವರ ಕೌರವನಂತೂ ಕಣ್ಣಿಗೆ ಹಬ್ಬ. ಜಲದಿಂದ ಎದ್ದು ಬಂದವನು ಚಿಟ್ಟಾಣಿಯಲ್ಲ..ಪಾಂಡವರ ತಲೆಯ ಬಡಿವೆನು ಎಂದು ಛಲದಿಂದೆದ್ದ ಬಂದ ಕುರುಕ್ಷೇತ್ರದ ಕೌರವನೇ ಇರಬೇಕು ಎಂದು ನೋಡುಗರಿಗನಿಸಿದ್ದು ಸುಳ್ಳಲ್ಲ. ಮಯ್ಯ ಬಾಗು ಬಳುಕು, ಹುಬ್ಬು ಮತ್ತು ಕಣ್ಣುಗಳ ಸಾಟಿಯಿಲ್ಲದ ಚಲನೆ, ಭಾವಕ್ಕನುಗುಣವಾಗಿ ಬಿರಿಯುವ, ಮುದುಡುವ ತುಟಿಗಳು, ಸನ್ನಿವೇಶಕ್ಕೆ ತಕ್ಕಂತೆ ಆಯ ಆಕಾರವನ್ನು ಪಡೆಯುವ ತೋಳುಗಳು, ಎಣೆಯಿಲ್ಲದ ಹಸ್ತಾಭಿನಯ - ಚಿಟ್ಟಾಣಿಯವರಿಗೆ ಚಿಟ್ಟಾಣಿಯವರೇ ಸಾಟಿ.

ವಿಶೇಷವೆಂದರೆ ಭಾಗವತ ಕೊಳಗಿಯವರು ಧಾರೇಶ್ವರ ನಿರ್ಮಿತ ’ನೋಡಿದಂ ವಿಶ್ವಾಧಾರ ಮೂರ್ತಿಯಂ’ ಎಂಬ ಭಾಮಿನಿಯನ್ನು ಕಪಟ ನಾಟಕ ರಂಗ ಪದ್ಯಕ್ಕೆ ಮೊದಲು ಬಳಸಿಕೊಂಡದ್ದು. ಭಾಗವತ ಸುಬ್ರಮಣ್ಯ ಧಾರೇಶ್ವರರ ಕಲ್ಪನೆಯ ಈ ಸನ್ನಿವೇಶ ಈಗ ಬಹುತೇಕ ಒಂದು ಸಂಪ್ರದಾಯದಂತೆಯೇ ಬಳಸಲ್ಪಡುತ್ತಿದೆ. ತಮ್ಮ ಛಲದಂಕ ಚಕ್ರೇಶ್ವರ ಪ್ರಸಂಗದಲ್ಲಿ ಧಾರೇಶ್ವರರು ಈ ಪದ್ಯವನ್ನು ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಬರೆಯಿಸಿ, ಮೊದಲ ಬಾರಿಗೆ ಚಿಟ್ಟಾಣಿಯವರ ಕೌರವನಿಗೆ ಬಳಸಿದರು. ಕೌರವ ತನ್ನ ಅಂತರಂಗ ವಿಮರ್ಶೆ ಮಾಡಿಕೊಳ್ಳುವ ಈ ಭಾಮಿನಿಗೆ ಚಿಟ್ಟಾಣಿಯವರ ಅಭಿನಯ ಅದ್ಭುತ. ಕೊಳಗಿಯವರ ಭಾಗವತಿಕೆ , ಶಂಕರ ಭಾಗವತ ಮತ್ತು ವಿಘ್ನೇಶ್ವರ ಕೆಸರಕೊಪ್ಪ ಅವರ ಹಿಮ್ಮೇಳ ಉತ್ತಮವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೊಳಗಿಯವರ ಭಾಗವತಿಕೆಗೆ ಕಳೆಯೇರುತ್ತಿದೆ.

ಒಟ್ಟಿನಲ್ಲಿ ಈ ಗದಾಯುದ್ಧ ’ಮರೆತೇನೆಂದರು ಮರೆಯಲಾಗದ’ ಪ್ರದರ್ಶನ ! ಸಂಯೋಜಕರಿಗೆ ಯಕ್ಷ ರಸಿಕರ ಪರವಾಗಿ ಅಭಿನಂದನೆಗಳು, ಅಭಿವಂದನೆಗಳು!

No comments: