Tuesday, July 8, 2008

ಅಮ್ಮಣ್ಣಾಯರು ಬಡಗಿಗೆ?




ಭಾಗವತ ದಿನೇಶ ಅಮ್ಮಣ್ಣಾಯರು ಸಾಲಿಗ್ರಾಮ ಮೇಳದ ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾರೆ ಎಂಬ ಪತ್ರಿಕಾ ಜಾಹೀರಾತು ಕಾಣಿಸಿಕೊಂಡಿದೆ. ಕೆಲವು ವರ್ಶದ ಹಿಂದೆ ಅಮ್ಮಣ್ಣಾಯರಿಗೆ ಸಾಲಿಗ್ರಾಮ ಮೇಳದಿಂದ ಕರೆ ಬಂದ ವರ್ತಮಾನವಿತ್ತು. ಏಕೋ ಏನೋ ಅವರು ಆಗ ಬಡಗು ತಿಟ್ಟಿಗೆ ಬರುವ ಮನಸ್ಸು ಮಾಡಿರಲಿಲ್ಲ. ಅಮ್ಮಣ್ಣಾಯರಂತ ಹಿರಿಯ ಭಾಗವತರಿಗೆ ಬಡಗು ತಿಟ್ಟಿಗೆ ಹೊಂದಿಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಒಂದು ಸಾಲಿಗ್ರಾಮ ಮೇಳದಲ್ಲಿ ಯಾಜಿಯವರದ್ದೇ ಕೊನೆಯ ಮಾತು. ಇನ್ನೊಂದು ಬಡಗು ತಿಟ್ಟಿನಲ್ಲಿರುವ ಹಲವು ವೈವಿಧ್ಯಗಳನ್ನು ಕರಗತ ಮಾಡಲು ಸಾಮನ್ಯವಾಗಿ ಒಬ್ಬ ಭಾಗವತಕನಿಗೆ ಸುಮಾರು ಐದು ವರುಶಗಳು ಬೇಕು. ಈ ವೈವಿಧ್ಯಗಳ ಅನುಭವವಿಲ್ಲದೆ ಬಡಗು ತಿಟ್ಟಿನಲ್ಲಿ ಭಾಗವತಕನಾಗಿ ಮಿಂಚುವುದು ಸುಲಭವಲ್ಲ. ಈ ಸವಾಲುಗಳ ಮಧ್ಯೆ ಅಮ್ಮಣ್ಣಾಯರು ಎಷ್ಟು ಯಶಸ್ವಿಯಾಗುತ್ತಾರೆ ಎಂದು ಹೇಳುವುದು ಕಷ್ಟ. ಇತ್ತೀಚಿನ ವರ್ಷಗಳಲ್ಲಿ ಸಾಲಿಗ್ರಾಮ ಮೇಳ ಹೆಚ್ಚಾಗಿ ಆಡುವುದು ಹೊಸ ಪ್ರಸಂಗಗಳನ್ನೆ. ಹೊಸ ಪ್ರಸಂಗಗಳಲ್ಲಿ ಸಿನೆಮಾ, ಸಂಗೀತದ ಹಾಡುಗಳನ್ನು ತುರುಕುವುದು ಸುಲಭ. ಈ ಕಾರಣದಿಂದಾಗಿ ಅಮ್ಮಣ್ಣಾಯರು ಬಡಗು ತಿಟ್ಟಿನಲ್ಲಿ ಒಂದು ಹೊಸ ಅಲೆ ಎಬ್ಬಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

No comments: