Sunday, July 26, 2009

ಕೊಂಡದಕುಳಿಯವರ ಅಮೋಘ ಭರತನ ಪಾತ್ರದಲ್ಲಿ ಮೆರೆದ ಧರ್ಮಾಂಗದ ದಿಗ್ವಿಜಯ

ಪಾತ್ರಕೊಪ್ಪುವ ಕುಣಿತ, ನೃತ್ಯ, ಮಾತು, ಹಾವ ಭಾವಗಳಿಂದ ಕೊಂಡದಕುಳಿಯವರು ಭರತನಾಗಿ ಯಕ್ಷಲೋಕವನ್ನು ಧರೆಗಿಳಿಸಿದರು. ಧರ್ಮಾಂಗದನಾಗಿ ಗೋಪಾಲಾಚಾರಿಯವರು ಉತ್ತಮ ಕುಣಿತಗಳಿಂದ ರಂಜಿಸಿದರೂ, ಅಭಿನಯದ ಕೊರತೆ ಎದ್ದು ಕಾಣುತ್ತಿತ್ತು. ಧರ್ಮಾಂಗದನ ಅಪರೂಪದ ಪ್ರಯಾಣ ನೃತ್ಯ ಗಮನ ಸೆಳೆಯಿತು. ಯಕ್ಶಗಾನದಲ್ಲಿ ಇತ್ತೀಚೆಗೆ ಮರೆಯಾಗುತ್ತಿರುವ ಯುದ್ಧ ನೃತ್ಯ, ಪ್ರಯಾಣ ನೃತ್ಯಗಳನ್ನು ಬಳಸುವುದು ನಿಜಕ್ಕೂ ಸ್ವಾಗತಾರ್ಹ. ಬಲಿಯಾಗಿ ಗುಡಿಗಾರರು ಉತ್ತಮ ಕುಣಿತದಿಂದ ಗಮನ ಸೆಳೆದರು. ಗುಡಿಗಾರರ ಮಾತುಗಾರಿಕೆ ಮಾತ್ರ ಬಲಿಯ ಪಾತ್ರಕ್ಕೆ ಲಘುವಾಗಿ ತೋರಿಬಂತು.

ಧಾರೇಶ್ವರರು ಮತ್ತೆ ಭಾರೀ ಯಕ್ಷ ರಸಾನುಭವವನ್ನು ನೀಡಿದರು. ಪ್ರಸಂಗ ಮುಂದುವರಿಯುತ್ತಿದ್ದಂತೆ ಧಾರೇಶ್ವರರರ ಭಾಗವತಿಕೆಗೆ ಕಾವೇರಿತು. ಭರತ, ಧರ್ಮಾಂಗದ, ಬಲಿ - ಈ ಮೂರೂ ಪಾತ್ರಗಳನ್ನು ಸಮರ್ಥವಾಗಿ ದುಡಿಸಿಕೊಂಡ ಧಾರೇಶ್ವರರು ಪ್ರಸಂಗದ ಯಶಸ್ಸಿಗೆ ಕಾರಣರಾದರು. ಸಾಹಿತ್ಯ ಸ್ಪಷ್ಟತೆ, ಭಾವಕ್ಕನುಗುಣವಾಗಿ ಪದ್ಯದ ಶಬ್ಧಗಳಿಗೆ ನೀಡುವ ಒತ್ತು, ಅಚ್ಚುಕಟ್ಟಾದ ಆಕರ್ಷಕ ಸ್ವರವಿನ್ಯಾಸ, ಭಾವಕ್ಕೊಪ್ಪುವ ರಾಗಗಳ ಬಳಕೆ ಧಾರೇಶ್ವರರ ವಿಶೇಷತೆ. ಕೇವಲ ವೀರ ರಸದ ಪ್ರಸಂಗದಲ್ಲೂ ಧಾರೇಶ್ವರರು ಅತ್ಯಂತ ಪರಿಣಾಮಕಾರಿಯಾಗಿ ಹಾಡಬಲ್ಲರು ಎಂಬುದಕ್ಕೆ ಈ ಪ್ರದರ್ಶನ ನಿದರ್ಶನ.

ಬಹುಶ: ಕೊಂಡದಕುಳಿಯವರು ಭರತನ ಪಾತ್ರ ವಹಿಸದಿದ್ದರೆ ಈ ಪ್ರಸಂಗ ಈ ಮಟ್ಟಿನ ಯಶಸ್ಸನ್ನು ಕಾಣುತ್ತಿರಲಿಲ್ಲ ಎಂಬುದು ನನ್ನ ಭಾವನೆ. ಹಾಗಾಗಿಯೇ ಅವರ ಹೆಸರಿನ ತಲೆಬರಹದಡಿಯಲ್ಲಿ ಉಳಿದ ವಿವರಗಳು ಕಾಣಿಸಿಕೊಂಡಿವೆ. ಬೆಂಗಳೂರು ಯಕ್ಶ ಪ್ರೇಮಿಗಳಿಗೆ, ಅಪರೂಪದ, ಆಕರ್ಷಕ ಪ್ರದರ್ಷನ ನೀಡಿದ ಕಲಾವೃಂದಕ್ಕೆ,ಸಂಘಟಕರಿಗೆ ವಂದನೆಗಳು. ಅಂದ ಹಾಗೆ ಈ ಪ್ರದರ್ಶನ ನಡೆದದ್ದು ಬೆಂಗಳೂರಿನ ಯಕ್ಷಗಾನ ಸಂಚಾಲಕ ನೈಲಾಡಿ ಪ್ರಕಾಶ ಶೆಟ್ಟಿಯವರ ಹೃದಯ ಚಿಕಿತ್ಸೆಯ ಸಹಾಯಾರ್ಥವಾಗಿ. ಅವರು ಬೇಗನೆ ಚೇತರಿಸಿಕೊಳ್ಳುವಂತಾಗಲಿ ಎಂಬ ಹಾರೈಕೆಯೊಂದಿಗೆ..

1 comment:

ಮೂರ್ತಿ ಹೊಸಬಾಳೆ. said...

ಕೊಂಡದಕುಲಿಯವರ ಯಾವುದೇ ಪಾತ್ರ ಈ ವರೆಗೆ ಬೀಳಾದ ದಾಖಲೆಗಳಿಲ್ಲ.ಅವರ ಅಪರೂಪದ ವೇಷ ಧರ್ಮಾಂಗದದ ಭರತನ ಬಗ್ಗೆ ವಸ್ತುನಿಷ್ಟ ಅಭಿಪ್ರಾಯ ಕೊಟ್ತಿದ್ದಕ್ಕೆ ಧನ್ಯವಾದಗಳು.