
ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪ್ರದರ್ಶನಗೊಂಡ ರುದ್ರಕೋಪ ಪ್ರಸಂಗದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ 'ಕೇಳಲು ಎರಡು ಕಿವಿಗಳು ಸಾಲದಾಯ್ತು, ನೋಡಲು ಎರಡು ಕಂಗಳು ಸಾಲದಾಯ್ತು'.
ರುದ್ರಕೋಪರಾಗಿ ಚಿಟ್ಟಾಣಿ ಮತ್ತು ಗೋಪಾಲಾಚಾರಿ, ಚಿತ್ರಾಕ್ಶಿಯಾಗಿ ನೀಲ್ಕೋಡ್, ರಕ್ತಜಂಘನಾಗಿ ಉಪ್ಪುಂದ, ರಕ್ತಕೇಶಿಯಾಗಿ ಗುಡಿಗಾರ, ಅಜ್ಜಿಯಾಗಿ ರಮೇಶ ಭಂಡಾರಿ, ದೂತನಾಗಿ ರವೀಂದ್ರ, ಭಾಗವತರಾಗಿ ಧಾರೇಶ್ವರ ಮತ್ತು ಕೊಳಗಿ, ಚೆಂಡೆಯಲ್ಲಿ ರಾಕೇಶ್ ಮಲ್ಯ ಮತ್ತು ಗುಂಡ, ಮದ್ದಳೆಯಲ್ಲಿ ಶ್ರೀಧರ ಭಂಡಾರಿ ಮತ್ತು ಸುನಿಲ್ ಭಂಡಾರಿ, ಚಂದ್ರಸೇನನಾಗಿ ವಿಶ್ವನಾಥ ಆಚಾರ್ಯ ಪ್ರೇಕ್ಶಕರಿಗೆ ಮರೆಯಲಾಗದ ರಸದೌತಣವನ್ನು ನೀಡಿದರು.
ಸರ್ವಕಲಾವಿದರೂ ಸರ್ವಾಂಗ ಸುಂದರ ಪ್ರದರ್ಶನ ನೀಡಿದರೂ ಈ ಪ್ರದರ್ಶನದಲ್ಲಿ ಹೊಡೆದು ಕಾಣಿಸಿದ ಅಂಶ ಧಾರೇಶ್ವರರ ಭಾಗವತಿಕೆ. ಆ ದಿನ ಅದೆಲ್ಲಿಯ ಉತ್ಸಾಹವೋ, ಧಾರೇಶ್ವರರು ಗಂಧರ್ವ ಗಾನದ ಸವಿಯನ್ನು ಮೊಗೆಮೊಗೆದು ಉಣಬಡಿಸಿದರು. ರಕ್ತಕೇಶಿಯ ಅಬ್ಬರದ ಪ್ರವೇಶಕ್ಕೆ ತೆಂಕಿನ ಚೆಂಡೆ, ಚಕ್ರತಾಳದ ಝೇಂಕಾರಕ್ಕೆ ಧಾರೇಶ್ವರರು ಬಂದು ರಂಗ ಸಾರಥ್ಯ ವಹಿಸಿದಾಗ ಒಂದು ಮಾಯಾಲೋಕವೇ ನಿರ್ಮಾಣವಾಯಿತು. ಹಳೆ, ಹೊಸ ಶೈಲಿಗಳ ಮೋಹಕ ಕೊಲಾಜ್, ಸ್ವರದ ಸರ್ವಾಂಗ ಸುಂದರ ಬಳಕೆ, ಅನುಭವದ ಮೂಸೆಯಲ್ಲಿ ಪರಿಪಕ್ವಗೊಂಡ ರಂಗತಂತ್ರಗಳು, ಪ್ರೇಕ್ಶಕರನ್ನು ಅಕ್ಶರಶ: ಸಂಮೋಹಿನಿಗೊಳಪಡಿಸಿತು. ಕೆಲವು ಪದ್ಯಗಳಂತೂ ಯಕ್ಷಲೋಕವನ್ನೇ ಧರೆಗಿಳಿಸಿತು. ಆರಂಭದಲ್ಲಿ ಹಾಡಿದ ಕೊಳಗಿಯವರೂ ಒಟ್ಟೂ ಪ್ರಸಂಗ ಕಳೆಗಟ್ಟಲು ಕಾರಣರಾದರು. ಪ್ರಸಂಗದುದ್ದಕ್ಕೂ ಪ್ರೇಕ್ಷಕರು ತಲೆದೂಗಿದರು, ಭಾವೋತ್ಕರ್ಶದ ಅಲೆಯಲ್ಲಿ ಕಣ್ಣೀರು ಮಿಡಿದರು, ಯಕ್ಶಲೋಕದ ಸವಿಯನ್ನು ಕ್ಷಣ ಕ್ಷಣವೂ ಅನುಭವಿಸಿದರು.
ರುದ್ರಕೋಪ ಪ್ರಸಂಗದ ಸ್ಥಾಪಿತ 'ಎಲ್ಲೆಲ್ಲೂ ಸೊಬಗಿದೆ' ಪದ್ಯಕ್ಕೆ ಬದಲಾಗಿ ಧಾರೇಶ್ವರರು ಹೊಸ ಪದ್ಯವನ್ನು ಬಳಸಿ ಹೊಸ ಪರಿಣಾಮವನ್ನುಂಟುಮಾಡಿದರು. ನಾನು ಕರೆದೊಯ್ದ ಹೊಸಪ್ರೇಕ್ಶಕರೀರ್ವರು ಮುಂದಿನ ಪ್ರದರ್ಶನಗಳಿಗೆ ನಾವಿದ್ದೇವೆ ಎಂದು ಹೇಳಿರುವುದು ಬಹುಶ: ಈ ಪ್ರದರ್ಶನದ ಯಶಸ್ಸಿಗೆ ಸಾಕ್ಷಿ!
ಒಟ್ಟಿನಲ್ಲಿ ಯಕ್ಶಗಾನದ ಇತಿಹಾಸದಲ್ಲಿ , ಅದರಲ್ಲೂ ಮುಖ್ಯವಾಗಿ ಧಾರೇಶ್ವರ ಆತ್ಮವ್ರುತ್ತಾಂತದಲ್ಲಿ ಅಗತ್ಯವಾಗಿ ದಾಖಲಾಗಬೇಕಾದ ಪ್ರದರ್ಶನವಿದು. ಸಂಘಟಕರಾದ ಕಲಾವಿದ ಮಂಜುನಾಥ ಕಟ್ಕೆರೆ, ಸರ್ವ ಕಲಾವಿದರಿಗೆ, ಅಭಿನಂದನೆಗಳು, ಅಭಿವಂದನೆಗಳು. ಯಕ್ಶಗಾನಂ ಗೆಲ್ಗೆ!
1 comment:
Dhareshwararannu swalpa atiyaagiyE attakkerisidante annisuttide!!!!!
Post a Comment