Sunday, April 11, 2010

ನೆಬ್ಬೂರರ ಅಮೋಘ ಗಾನ ನಿನಾದದಲ್ಲಿ ರಂಜಿಸಿದ ಶ್ರೀರಾಮ ನಿರ್ಯಾಣ

ಶ್ರೀರಾಮ ನಿರ್ಯಾಣ ಎಂಭತ್ತರ ದಶಕದಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ, ಇಡಗುಂಜಿ ಮೇಳದಲ್ಲಿ ಶಂಭು ಹೆಗಡೆ ಮತ್ತು ನೆಬ್ಬೂರು ಭಾಗವತರಿಂದ ಪ್ರಸಿದ್ಧಿಗೆ ಬಂದ ಪ್ರಸಂಗ. ಈ ಪ್ರಸಂಗದ ಹಾಡುಗಳಿಗೆ ನೆಬ್ಬೂರರು ಮಾದರಿಯಾದರೆ ಶ್ರೀರಾಮನ ಪಾತ್ರಕ್ಕೆ ಶಂಭು ಹೆಗಡೆಯವರೇ ಮಾದರಿ. ಹೊಸ ಪೀಳಿಗೆಯ ಕಲಾವಿದರಲ್ಲಿ ನಿರ್ಯಾಣದ ರಾಮನ ಪಾತ್ರವನ್ನು ಕೊಂಡದಕುಳಿ ಮಾತು ಯಾಜಿಯವರು ನಿರ್ವಹಿಸುತ್ತಿದ್ದರೆ, ಭಾಗವತಿಕೆಯಲ್ಲಿ ಈ ಪ್ರಸಂಗವನ್ನು ಕಳೆಗಟ್ಟಿಸುವ ಭಾಗವತರು ಹೊಸ ಪೀಳಿಗೆಯಲ್ಲಿಲ್ಲ.

ಬೆಂಗಳೂರಿನಲ್ಲಿ ನಡೆದ ಕೊಂಡದಕುಳಿ ಬಳಗ ರಾಮ ನಿರ್ಯಾಣ ಉತ್ತಮವಾಗಿ ಮೂಡಿ ಬಂತು. ಈ ಪ್ರಸಂಗವನ್ನು ಕಳೆಗಟ್ಟಿಸಿದ್ದು ನೆಬ್ಬೂರರ ಶ್ರೇಶ್ಟ ಭಾಗವತಿಕೆ ಮತ್ತು ಹಡಿನಬಾಳ ಶ್ರೀಪಾದ ಹೆಗಡೆಯವರ ದೂರ್ವಾಸನ ಪಾತ್ರ. ಯಕ್ಶಗಾನದ ಪರಂಪರೆಯ ಹಾಡುಗಳ ರುಚಿಯನ್ನು ಉಣಬಣಿಸಿದ ನೆಬ್ಬೂರರು ಹೊಸ ಪ್ರೇಕ್ಶಕ ವರ್ಗ ಕೂಡಾ ಈ ಸವಿಗೆ ತಲೆದೂಗುವಂತೆ ಮಾಡಿದರು. ನಿರ್ಯಾಣ ನೆಬ್ಬೂರರ ’ಮಾಸ್ಟರ್ ಪೀಸ್’ ಪ್ರಸಂಗಗಳಲ್ಲೊಂದು. ಶ್ರೀಪಾದ ಹೆಗಡೆಯವರ ದೂರ್ವಾಸ ಮಹಾಬಲ ಹೆಗಡೆಯವರನ್ನು ನೆನಪಿಸಿತು. ಪೋಶಕ ಪಾತ್ರವೊಂದನ್ನು ಹೇಗೆ ಪ್ರೇಕ್ಶಕನ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ ಮಾಡಿ ತೋರಿಸಬಹುದು ಎಂಬುದಕ್ಕೆ ಈ ಪಾತ್ರ ಉದಾಹರಣೆ. ತೊಂಭತ್ತರ ದಶಕದಲ್ಲಿ ಮಹಾಬಲ ಹೆಗಡೆಯವರು ಬ್ರಹ್ಮ ಕಪಾಲ ಪ್ರಸಂಗದಲ್ಲಿ ಮಹೋಗ್ರನ ಪಾತ್ರದಲ್ಲಿ ಇದೇ ರೀತಿಯ ಪರಿಣಾಮವನ್ನು ಉಂಟು ಮಾಡಿದ್ದು ನೆನಪಿಗೆ ಬಂತು.

ನಿಟ್ಟೂರು ಅನಂತ ಹೆಗಡೆಯವರ ಕಾಲಪುರುಶ ಉತ್ತಮವಾಗಿತ್ತು. ಲಕ್ಶ್ಮಣನಾಗಿ ತೋಟಿಯವರು ಪರಿಣಾಮ ಬೀರಲಿಲ್ಲ. ಲಕ್ಶ್ಮಣನ ವೇಶ ತೋಟಿಯವರಿಗೆ ಒಪ್ಪಲಿಲ್ಲ. ರಾಮ ಮತ್ತು ಲಕ್ಸ್ಮಣನ ಮೀಸೆಯನ್ನು ನೋಡುತ್ತಿದ್ದರೆ ರಾಜವೇಶಗಳಿಗೆ ಸಂಪ್ರದಾಯದಂತೆ ’ಕಟ್ಟು ಮೀಸೆ’ಯನ್ನು ಬಳಸುವುದೇ ಸೂಕ್ತ ಎಂದೆನಿಸಿತು. ರಾಮನಾಗಿ ಕೊಂಡದಕುಳಿಯವರು ಉತ್ತಮ ನ್ರುತ್ಯ ಮತ್ತು ಭಾವಭಿನಯಗಳಿಂದ ರಂಜಿಸಿದರೂ ಮಾತುಗಾರಿಕೆ ಸೊರಗಿತು. ಕೊಂಡದಕುಳಿಯವರ ಸ್ವರ ಮತ್ತು ಮಾತುಗಾರಿಕೆಯ ಶೈಲಿ ಶೋಕ ರಸ ಮತ್ತು ವೀರ ರಸಗಳ ಅಭಿವ್ಯಕ್ತಿಗೆ ಹೇಳಿಸಿದ್ದಲ್ಲ ಎಂಬ ವಿಮರ್ಶಕರ ಮಾತು ನಿಜವೆನಿಸಿತು. ಆದರೆ ಪ್ರಸ್ತುತ ಪೀಳಿಗೆಯ ಕಲಾವಿದರಲ್ಲಿ ರಾಮನ ಪಾತ್ರವನ್ನು ಅಚ್ಚಿಕಟ್ಟಾಗಿ ನಿರ್ವಹಿಸಬಲ್ಲ ಕಲಾವಿದ ಕೊಂಡದಕುಳಿ ಎಂಬುದರಲ್ಲಿ ಅನುಮಾನವಿಲ್ಲ. ಅವರ ಕುಶ ಲವ ಪ್ರಸಂಗದ ರಾಮನ ಪಾತ್ರ ಒಂದು ’ಮಾಸ್ಟರ್ ಪೀಸ್’.

ಕೊಂಡದಕುಳಿಯವರು ಹೊಸದಾಗಿ ಅಳವಳಿಸಿದ ’ವೈಕುಂಠ ದರ್ಶನ’ ದಲ್ಲಿ ದಶಾವತಾರವನ್ನು ಹಸ್ತಮುದ್ರಿಕೆಗಳ ಮೂಲಕ ಸುಂದರವಾಗಿ ನಿರೂಪಿಸಿದರು. ಇದು ರಾಮನಿರ್ಯಾಣದಲ್ಲಿ ಕೊಂಡದಕುಳಿಯವರ ಸೇರ್ಪಡೆಯಾದರೂ ಯಕ್ಶಗಾನಕೆ ಹೊಸದಲ್ಲ. ಶಂಭು ಹೆಗಡೆಯವರು ರಾವಣ ವಧೆ ಪ್ರಸಂಗದಲ್ಲಿ ಇದೇ ರೀತಿಯ ಅಭಿನಯ ಮಾಡುತ್ತಿದ್ದರೆ, ಚಿಟ್ಟಾಣಿಯವರು ಕೌರವನಾಗಿ ಛಲದಂಕ ಚಕ್ರೇಶ್ವರ ಪ್ರಸಂಗದಲ್ಲಿ ಈ ಪ್ರಯೋಗವನ್ನು ಮಾಡಿದ್ದಾರೆ. ಕೊಂಡದಕುಳಿಯವರ ಕಲ್ಪನೆ ಯಕ್ಶಗಾನಕ್ಕಿಂತಲೂ ನ್ರುತ್ಯ ರೂಪಕದೆಡೆಗೆ ವಾಲಿತ್ತು.

ಆರಂಭದಲ್ಲಿ ಕೊಂಡದಕುಳಿಯವರ ಪುತ್ರಿಯರಿಂದ ಬಾಲಗೋಪಾಲ ಪೂರ್ವರಂಗ ಚೆನ್ನಾಗಿ ಮೂಡಿ ಬಂತಾದರೂ, ಇದು ಕೂಡಾ ನ್ರುತ್ಯ ರೂಪಕದಂತೆ ತೋರಿ ಬಂತು.

ಅಪರೂಪದ ಪ್ರಸಂಗವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ ಸಂಘಟಕರಿಗೆ ವಂದನೆಗಳು. ಹತ್ತು ನಿಮಿಶದ ಸನ್ಮಾನ ಐವತ್ತು ನಿಮಿಷಗಳನ್ನು ನುಂಗಿದ್ದು (ಸಿನೆಮಾ ನಟ ಶ್ರೀಧರರ ಮಾತುಗಾರಿಕೆ ಬೇಕಿತ್ತೆ?) ಮಾತ್ರ ಅಸಹನೀಯವಾಗಿತ್ತು.

No comments: